ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಇಂಧನ ಪೂರೈಕೆಯಲ್ಲಿ ಅಡೆತಡೆಗಳಾಗುತ್ತಿದ್ದು, ಇದರ ನಡುವೆ ಕೇಂದ್ರ ಸರಕಾರ ಎಲ್ ಪಿಜಿ ಬದಲು ಪಿಎನ್ ಜಿ ಗೆ ಹೆಚ್ಚು ಒತ್ತು ನೀಡಲು ಮುಂದಾಗಿದ್ದು, ಬರೋಬ್ಬರಿ 50 ಲಕ್ಷ ಹೊಸ ಪಿಎನ್ ಜಿ ಸಂಪರ್ಕ ಕಲ್ಪಿಸಲು ನಿರ್ಧರಿಸಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ʼಪೈಪ್ಡ್ ನೈಸರ್ಗಿಕ ಅನಿಲ ಸೇವೆಗಳ ವಿಸ್ತರಣೆ ಮತ್ತು ಅಗತ್ಯ ಸೇವೆ ನಿರ್ವಹಣೆʼ ಕುರಿತ ದುಂಡು ಮೇಜಿನ ಸಭೆಯಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರು ವಿವಿಧ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ನಿರ್ಧಾರ ಕೈಗೊಂಡಿದ್ದಾರೆ.
ಈಗಾಗಲೇ ಮೂಲಸೌಕರ್ಯ ಲಭ್ಯವಿರುವ ಪ್ರದೇಶಗಳಲ್ಲಿ ಪಿಎನ್ ಜಿ ವನ್ನು ಹೆಚ್ಚುಗೊಳಿಸಲು ಜೋಶಿ ಸಲಹೆ ನೀಡಿದರು. ಮುಖ್ಯವಾಗಿ ಶಾಲಾ-ಕಾಲೇಜು, ಸಾರ್ವಜನಿಕ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಿದರು.
ಯಾವುದೇ ಒಂದು ಕಾರ್ಯ ಸಿದ್ದಿಗೆ ಎಲ್ಲರ ಸಹಕಾರ ಮುಖ್ಯವಾಗಿದ್ದು, ಅದೇ ರೀತಿ ದೇಶದಲ್ಲಿ ಪಿಎನ್ ಜಿ ವಿಸ್ತರಣೆಯಾಗಲು ರಾಜ್ಯಗಳ ಸಮನ್ವಯ ಮುಖ್ಯವಾಗಿದೆ. ಈ ಮೂಲಕ ಗ್ರಾಹಕರು ಎಲ್ ಪಿಜಿ ಬದಲು ಪಿಎನ್ ಜಿಗೆ ಪರಿವರ್ತನೆಯಾಗುವಂತೆ ಬೆಂಬಲಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಈ ಕೆಲಸ ಕಾರ್ಯ ವೇಗವಾಗಿ ನಡೆಯುವ ಸಲುವಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲು ಒಪ್ಪಿಕೊಂಡಿವೆ. ಸಿಜಿಡಿ ಘಟಕಗಳು ಮತ್ತು ಪುರಸಭೆ ಆಯುಕ್ತರು ಪಿಎನ್ ಜಿ ಸಂಪರ್ಕ ಸಮಯ ಉಂಟಾಗುವ ಸವಾಲುಗಳನ್ನು ಪರಿಹರಿಸಿ, ಎಲ್ಲಾ ಕಡೆ ಯೋಜನೆ ತಲುಪುವಂತೆ ಮಾಡಬೇಕೆಂದು ತಿಳಿಸಿದರು.
ಈ ದುಂಡು ಮೇಜಿನ ಸಭೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ , ವಸತಿ ಮತ್ತು ನಗರ ವ್ಯವಹಾರಗಳ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯಗಳ ಕೇಂದ್ರ ಸಚಿವರು, ಕಾರ್ಯದರ್ಶಿಗಳು, ಕೇಂದ್ರದ ಹಿರಿಯ ಅಧಿಕಾರಿಗಳು, ರಾಜ್ಯ ಸಚಿವರು, ನಗರಾಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳ ರಾಜ್ಯ ಕಾರ್ಯದರ್ಶಿಗಳು, ಪುರಸಭೆ ಆಯುಕ್ತರು, GAIL, ಇಂಡಿಯನ್ ಆಯಿಲ್ನ CMD ಗಳು ಮತ್ತು ನಗರ ಅನಿಲ ವಿತರಣಾ (CGD) ಘಟಕಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.



