March 25, 2026
Wednesday, March 25, 2026
spot_img

ನಾನು, ಸಿಎಂ ಒಟ್ಟಿಗೆ ಸಹೋದರರಂತೆ ಕೆಲಸ ಮಾಡುತ್ತಿದ್ದೇವೆ: ಡಿಕೆ ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಸಿಎಂ ಸ್ಥಾನದ ಕುರಿತು ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ತೀವ್ರ ಜಟಾಪಟಿ ನಡೆಯುತ್ತಿದ್ದು, ಇದೀಗ ನನಗೆ ಕಾಂಗ್ರೆಸ್​ನ ಯಾವುದೇ ನಾಯಕರೊಂದಿಗೆ ಭಿನ್ನಾಭಿಪ್ರಾಯವಿಲ್ಲ. ನಾನು, ಸಿಎಂ ಒಟ್ಟಿಗೆ ಸಹೋದರರಂತೆ ಕೆಲಸ ಮಾಡುತ್ತಿಲ್ಲವೇ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಪ್ರಶ್ನೆ ಹಾಕಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾತನಾಡಿದ ಅವರು, ಎಲ್ಲ ಕಾಂಗ್ರೆಸ್​​​ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ನನ್ನ ಸ್ನೇಹಿತರು, ಸಹೋದ್ಯೋಗಿಗಳು, ಒಟ್ಟಿಗಿದ್ದೇವೆ. ನಾನಂತೂ ಯಾರ ಮೇಲೂ ಜಗಳ ಮಾಡಲು ಹೋಗಿಲ್ಲ. ಯಾವ ವಿಚಾರಕ್ಕೂ ಒಬ್ಬರ ಮೇಲೆ ಇನ್ನೊಬ್ಬರು ಇದುವರೆಗೂ ಹೇಳಿಕೆ ನೀಡಿಲ್ಲ. ದಾಖಲೆಗಳನ್ನು ತೆಗೆದು ನೋಡಿ. ವಿರೋಧ ಪಕ್ಷದವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಿದ್ದೇನೆಯೇ ಹೊರತು, ನಾನಾಗಿಯೇ ಯಾರ ಮೇಲೂ ಹೇಳಿಕೆ ನೀಡಿಲ್ಲ. ನಾನಾಗಿಯೇ ಒಬ್ಬರ ಮೇಲಾದರೂ ಹೇಳಿಕೆ ನೀಡಿದ್ದರೆ ತಿಳಿಸಿ ಎಂದು ಮರುಪ್ರಶ್ನಿಸಿದರು.

ಮುಖ್ಯಮಂತ್ರಿಯವರ ಆಪ್ತ ಬಳಗದವರನ್ನು ಭೇಟಿ ಮಾಡಿರುವ ಕುರಿತ ಪ್ರಶ್ನೆಗೆ, ಅವರಿಗೆ ಸಿಎಂ ಆಪ್ತರೇನು?. ಅವರು ನನಗೂ ಆಪ್ತರೇ. ಅವರು ಯಾರಿಗೆ ಆಪ್ತರಿಲ್ಲ ಹೇಳಿ?. ನಾನು ಸಿಎಂ ಆಪ್ತರಲ್ಲವೇ? ರಾಜಣ್ಣ ಅವರು ಜನತಾ ದಳದಲ್ಲಿದ್ದರು. ನಾನು ಕಾಂಗ್ರೆಸ್​ನವನು. ಅಂದು ಎಸ್​.ಎಂ.ಕೃಷ್ಣ ಅವರ ಅವಧಿಯಲ್ಲಿ ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡಿದ್ದು ನಾನು. ಹೋಗಿ ಬೇಕಾದರೆ ಅವರನ್ನೇ ಕೇಳಿ?. ಸಿಎಂಗೂ ಇದಕ್ಕೂ ಸಂಬಂಧವೇ ಇಲ್ಲ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !