ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಸಿಎಂ ಸಿದ್ದರಾಮಯ್ಯ ಟಾರ್ಗೆಟ್ ಮಾಡಿದ್ದು , ನಮ್ಮನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಕುಮಾರಸ್ವಾಮಿ, ಎಚ್.ಡಿ. ದೇವೇಗೌಡರನ್ನು ಯಾವ ರೀತಿ ಮುಗಿಸಬೇಕು. ಯಾವ ರೀತಿ ಇವರ ಚಾರಿತ್ರ್ಯ ಹರಣ ಮಾಡಬೇಕು ಎಂದು ಸಿಎಂ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಕುಟುಂಬದ ಒಳಗೆ ನಡೆದ ಒಂದು ಪ್ರಕರಣ ವಿಚಾರದಲ್ಲಿ ಎಚ್.ಡಿ. ದೇವೇಗೌಡರನ್ನು ಮಾನಸಿಕವಾಗಿ ಕುಗ್ಗಿಸುವ ಬಹಳ ಪ್ರಯತ್ನ ಆಗಿದೆ. ದೇವೇಗೌಡರ ಗರಡಿಯಲ್ಲೆ ಬೆಳೆದ ಸಿದ್ದರಾಮಯ್ಯ ಈಗ ದೇವೇಗೌಡ ಕುಟುಂಬಕ್ಕೆ ಕೊಡುತ್ತಿರುವ ಕೊಡುಗೆ ಒಂದಾ ಎರಡಾ? ವೀರಪ್ಪನ್ ಪ್ರಕರಣದಲ್ಲಿ ಪೊಲೀಸರಿಗೆ ಬಹುಮಾನ ರೂಪದಲ್ಲಿ ಹಣ ನೀಡಲಾಗಿತ್ತು. ಅದು ಬಿಟ್ಟರೆ ಹಾಸನದ ಕೇಸ್ ವಿಚಾರದಲ್ಲೇ ಸರಕಾರ ಪೊಲೀಸರಿಗೆ 30 ಲಕ್ಷ ರು. ಬಹುಮಾನವಾಗಿ ಕೊಟ್ಟಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಹೆಚ್ಡಿ ದೇವೇಗೌಡರ ಜೊತೆಗೆ ಬೆಳೆದು ಈ ರೀತಿ ಮಾಡುತ್ತಿದ್ದಾರೆ. ಆದ್ರೆ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಮೈಸೂರಿನಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ 11ಕ್ಕೆ 11 ಸೀಟ್ ಗೆದ್ದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದರು.



