March 27, 2026
Friday, March 27, 2026
spot_img

ರಾಜ್ಯದಲ್ಲಿ ಹೆಚ್ಚಾದ ಚಳಿ! ಕರಾವಳಿ ಜಿಲ್ಲೆಗಳಲ್ಲಿ ಮಂಜು ಜೊತೆಗೆ ಮಳೆ ಕೂಡ ಇದ್ಯಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ವಾತಾವರಣದಲ್ಲಿ ಮುಂದಿನ ಒಂದು ವಾರ ಗಮನಾರ್ಹ ಬದಲಾವಣೆ ಕಾಣುವ ಸಾಧ್ಯತೆಯಿದ್ದು, ಮುಂಜಾನೆ ವೇಳೆಯಲ್ಲಿ ಚಳಿ ಹೆಚ್ಚಾಗುವ ಜೊತೆಗೆ ಕೆಲವು ಭಾಗಗಳಲ್ಲಿ ಮಂಜಿನ ವಾತಾವರಣ ಆವರಿಸುವ ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಶೇಷವಾಗಿ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬೆಳಗಿನ ಸಮಯದಲ್ಲಿ ತಾಪಮಾನ ಕುಸಿಯುವ ನಿರೀಕ್ಷೆಯಿದ್ದು, ಶೀತ ವಾತಾವರಣ ಜನಜೀವನದ ಮೇಲೆ ಪ್ರಭಾವ ಬೀರಲಿವೆ.

ಇನ್ನೊಂದೆಡೆ, ಕರಾವಳಿ ಜಿಲ್ಲೆಗಳು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಮೋಡ ಕವಿದ ವಾತಾವರಣದೊಂದಿಗೆ ಚದುರಿದ ಮಳೆ ಸುರಿಯುವ ಸಾಧ್ಯತೆ ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾದರೆ, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ನವರೆಗೆ ಇಳಿಯುವ ಸಾಧ್ಯತೆ ಇದೆ. ಮಡಿಕೇರಿಯಲ್ಲಿ ಕೂಡ ತಾಪಮಾನದಲ್ಲಿ ಇಳಿಮುಖ ಕಂಡುಬರುವ ನಿರೀಕ್ಷೆಯಿದ್ದು, ಗರಿಷ್ಠ 26 ಹಾಗೂ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಮಂಗಳೂರು, ಉಡುಪಿ, ಕಾರವಾರದಂತಹ ಕರಾವಳಿ ಭಾಗಗಳಲ್ಲಿ ತುಸು ಉಷ್ಣತೆ ಮುಂದುವರಿದರೂ ಮಳೆಯ ಮೋಡಗಳು ಕಂಡುಬರುತ್ತಿವೆ.

ಒಟ್ಟಾರೆ, ರಾಜ್ಯದ ವಿಭಿನ್ನ ಭಾಗಗಳಲ್ಲಿ ಚಳಿ, ಮಂಜು ಹಾಗೂ ಮಳೆಯ ಸಂಯೋಜಿತ ವಾತಾವರಣ ಕಂಡುಬರುವ ಸಾಧ್ಯತೆ ಇದ್ದು, ನಾಗರಿಕರು ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಜಾಗ್ರತೆ ವಹಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !