ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿನ ಅಡುಗೆ ಅನಿಲ ಅಭಾವ ಮತ್ತು ಬ್ಲಾಕ್ ಮಾರ್ಕೆಟ್ ಹಾವಳಿಯ ವಿಷಯ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ವಾಕ್ಸಮರಕ್ಕೆ ವೇದಿಕೆಯಾಯಿತು.
ಶಾಸಕ ರಂಗನಾಥ್ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಗ್ಯಾಸ್ ಸಮಸ್ಯೆಗೆ ಮೋದಿ ಸರ್ಕಾರದ ವಿದೇಶಾಂಗ ನೀತಿಯೇ ಕಾರಣ ಎಂದರು. ಸಚಿವ ಪ್ರಿಯಾಂಕ್ ಖರ್ಗೆ ಅವರು “ಟ್ರಂಪ್ ಫ್ರೆಂಡ್ ಅಂದರಲ್ಲಾ, ಈಗ ವಿದೇಶಾಂಗ ನೀತಿ ಏನಾಯ್ತು?” ಎಂದು ಪ್ರಶ್ನಿಸಿ, ಎಸ್ಮಾ ಜಾರಿ ಬಗ್ಗೆ ಕೇಂದ್ರವನ್ನು ಕುಟುಕಿದರು.
ಯುದ್ಧದ ಸನ್ನಿವೇಶದಿಂದಾಗಿ ಜಾಗತಿಕವಾಗಿ ಈ ಸಮಸ್ಯೆ ಎದುರಾಗಿದೆ, ಇದರಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಆಕ್ಷೇಪಿಸಿದರು. ರಾಜ್ಯ ಸರ್ಕಾರಕ್ಕೆ ಸರ್ವರ್ ಸಮಸ್ಯೆ ಸರಿಪಡಿಸುವ ಯೋಗ್ಯತೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
“ಗ್ಯಾಸ್ ಪೂರೈಕೆ ಮಾಡುವುದು ಕೇಂದ್ರ ಸರ್ಕಾರ, ಬೆಲೆ ಏರಿಕೆ ಮಾಡಿದ್ದೂ ನೀವೇ” ಎಂದು ಸಿಎಂ ಕಿಡಿಕಾರಿದರು. ಹೋಟೆಲ್ ಮಾಲೀಕರ ಮುಷ್ಕರವನ್ನು ತಾವು ಬೆಂಬಲಿಸಿರುವುದಾಗಿ ಅಶೋಕ್ ಅವರ ಪ್ರಶ್ನೆಗೆ ಇದೇ ವೇಳೆ ಸಿಎಂ ಸ್ಪಷ್ಟನೆ ನೀಡಿದರು.



