March 27, 2026
Friday, March 27, 2026
spot_img

ಡಿ.10ರಂದು ಲಿಂಗಾಯತರ ಮೇಲಿನ ದೌರ್ಜನ್ಯ ದಿನವೆಂದು ಆಚರಿಸಲು ನಿರ್ಧಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಡಿ. 10ರಂದು ಲಿಂಗಾಯತರ ಮೇಲಿನ ದೌರ್ಜನ್ಯ ದಿನ ಆಚರಣೆ ಮಾಡಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ತಿಳಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು ಕಳೆದ ಡಿ.10ರಂದು ನಮ್ಮ ಮೇಲೆ ಸರ್ಕಾರ ಅಮಾನವೀಯವಾಗಿ ವರ್ತಿಸಿತ್ತು. ದಿನಾಚರಣೆ ಅಂಗವಾಗಿ ಬೆಳಗ್ಗೆ 10ಕ್ಕೆ ಬೆಳಗಾವಿ ಗಾಂಧಿ ಭವನದಿಂದ ಎಡಕೈಗೆ ಮತ್ತು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬಲಗೈಯಲ್ಲಿ ಚೆನ್ನಮ್ಮನ ಧ್ವಜ ಹಿಡಿದು ಮೌನ ಪಥಸಂಚಲನ ನಡೆಸಲಿದ್ದೇವೆ ಎಂದು ತಿಳಿಸಿದರು.

ಹೇಗೆ ನರಗುಂದದ ರೈತರು ನರಗುಂದ ಬಂಡಾಯ ಎಂದು ಆಚರಣೆ ಮಾಡುತ್ತಾರೋ. ಆ ರೀತಿ ನಾವು ಪ್ರತಿವರ್ಷ ಲಿಂಗಾಯತರ ಮೇಲಿನ ದೌರ್ಜನ್ಯ ದಿನ ಎಂದು ಆಚರಣೆ ಮಾಡುತ್ತೇವೆ. ಪಂಚಮಸಾಲಿಗಳಿಗೆ 2ಎ ಮೀಸಲಾತಿ ಸಿಗುವವರೆಗೆ ನಾವು ಈ ದಿನವನ್ನು ಪ್ರತಿ ವರ್ಷ ಡಿ.10 ರಂದು ಆಚರಿಸುತ್ತೇವೆ. ನಮ್ಮ ಮೇಲೆ ಈ ದಿನ ನಡೆದ ದೌರ್ಜನ್ಯದ ನೋವನ್ನು ತಡೆದುಕೊಂಡು ಮುಂದೆ ಮೀಸಲಾತಿ ಸಿಗುವ ಸಂಕಲ್ಪ ಮಾಡುತ್ತೇವೆ. ಅದೇ ರೀತಿ ಮುಂದೆ ಯಾವುದೇ ಪಕ್ಷದ ಯಾವುದೇ ಸರ್ಕಾರ ರಾಜ್ಯದಲ್ಲಿದ್ದರೂ ಸಹ ಮೀಸಲಾತಿ ಕೇಳುವ ಸಮುದಾಯದ ಮೇಲೆ ಈ ರೀತಿ ಅಮಾನವೀಯ ವರ್ತನೆ ಮಾಡಬಾರದು ಎನ್ನುವ ಎಚ್ಚರಿಕೆ ಸಂದೇಶ ನೀಡಲು ಈ ದಿನ ಆಚರಣೆ ಮಾಡುತ್ತಿದ್ದೇವೆ. ಮುಂದೆ ನಮಗೆ ಮೀಸಲಾತಿ ಸಿಗುವವರೆಗೆ ಈ ರೀತಿ ದಿನ ಆಚರಣೆ ಮಾಡುತ್ತೇವೆ. ನಮ್ಮ ಹೋರಾಟ ಹತ್ತಿಕ್ಕಿದ ದಿನವಾದ ಡಿ.10 ರಂದು ಮೂರು ಸಂದೇಶಗಳನ್ನು ನೀಡುತ್ತಿದ್ದೇವೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !