February 4, 2026
Wednesday, February 4, 2026
spot_img

ದೆಹಲಿ ಕಾರ್ ಸ್ಫೋಟ | ಜಮ್ಮು- ಕಾಶ್ಮೀರದಲ್ಲಿ ಬೃಹತ್ ಕಾರ್ಯಾಚರಣೆ: ಸಾವಿರಕ್ಕೂ ಹೆಚ್ಚು ಜನರು ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಕಾರ್ ಬಾಂಬ್ ಸ್ಫೋಟ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದಾದ್ಯಂತ ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ. ಭೂಗತ ಪಾತಕಿಗಳು, ಮೂಲಭೂತವಾದಿಗಳು, ನಿಷೇಧಿತ ಜಮಾತ್ ಇ ಇಸ್ಲಾಮ್​ ಸಂಘಟನೆಯ ಸದಸ್ಯರು ಮತ್ತು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಸಂಬಂಧಿಕರು ಸೇರಿದಂತೆ 1000 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ನಾಲ್ಕು ದಿನಗಳಲ್ಲಿ ಕುಲ್ಗಾಮ್ ಜಿಲ್ಲೆಯ 200ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ದಾಳಿ ನಡೆಸಲು ಬಳಸುವ ಸ್ಫೋಟಕ ಸಾಮಗ್ರಿಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿಷೇಧಿತ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಸುಮಾರು 500 ಜನರನ್ನು ವಿಚಾರಣೆ ನಡೆಸಲಾಗಿದೆ. ಅದರಲ್ಲಿ ಹಲವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಕೆಲವರನ್ನು ಅನಂತ್‌ನಾಗ್‌ನ ಮಿತ್ತನ್‌ ಜಿಲ್ಲಾ ಜೈಲಿಗೆ ವರ್ಗಾಯಿಸಲಾಗಿದೆ. ವಿಧ್ವಂಸಕ ಕೃತ್ಯಗಳ ವಿರೋಧಿ ಕಾಯ್ದೆಗಳ ಅಡಿಯಲ್ಲಿ ಇವರ ವಿರುದ್ಧ ಕೇಸ್​ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಾರಾಮುಲ್ಲಾ ಜಿಲ್ಲೆಯ ಸೋಪೋರ್, ಜಿಂಗರ್ ಮತ್ತು ರಫಿಯಾಬಾದ್ ಪ್ರದೇಶ ಸೇರಿದಂತೆ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಯಿತು. ನಿಷೇಧಿತ ಜೆಇಐ ಸಂಘಟನೆಗೆ ಸಂಬಂಧಿತ ಜನರು ಹೊಸ ಸಂಘಟನೆಗಳ ಅಡಿಯಲ್ಲಿ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಗಳ ಸಮಯದಲ್ಲಿ, ನಿಷೇಧಿತ ಸಂಘಟನೆಗೆ ಸಂಬಂಧಿಸಿದ ಹಲವಾರು ದಾಖಲೆಗಳು, ಡಿಜಿಟಲ್ ಗ್ಯಾಜೆಟ್‌ಗಳು ಮತ್ತು ಮುದ್ರಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಗಳು ಮುನ್ನೆಚ್ಚರಿಕೆ ಮತ್ತು ಗುಪ್ತಚರ ಆಧಾರಿತವಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಶಾಂತಿ ಕಾಪಾಡುವ, ಯಾವುದೇ ಸಂಘಟನೆ ಅಥವಾ ವ್ಯಕ್ತಿಯು ಸ್ಥಳೀಯರಿಗೆ ಹಾನಿ ಉಂಟು ಮಾಡದಂತೆ ತಡೆಯುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನದಿಗಮ್‌ನ ಡಾ. ಹಮೀದ್ ಫಯಾಜ್ ಮತ್ತು ಚಿತ್ರಗಮ್‌ನ ಮುಹಮ್ಮದ್ ಯೂಸುಫ್ ಫಲಾಹಿ ಸೇರಿದಂತೆ ಜೆಇಐ ಸದಸ್ಯರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಗುಪ್ತಚರ ಮಾಹಿತಿಯ ನಂತರ ಭಯೋತ್ಪಾದನಾ ನಿಗ್ರಹದ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !