ಹೊಸದಿಗಂತ ವರದಿ ಮಂಗಳೂರು:
ಯಕ್ಷಗಾನ ಹಿರಿಯ ಭಾಗವತ, ರಸರಾಗ ಚಕ್ರವರ್ತಿ ಬಿರುದಾಂಕಿತ ದಿನೇಶ್ ಅಮ್ಮಣ್ಣಾಯ ಅವರು ರಂಗಸ್ಥಳಕ್ಕೆ ವಿದಾಯ ಹೇಳಿದ್ದಾರೆ.
ದಿನೇಶ್ ಅಮ್ಮಣ್ಣಾಯ ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನ ಹೊಂದಿದರು.
ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ನಿವಾಸಿಯಾಗಿರುವ ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ತನ್ನ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.
ಕೆಲ ಸಮಯದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಗುರುವಾರ ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿಯಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದ್ದಾರೆ. ಎಡನೀರು, ಕರ್ನಾಟಕ ಮೇಳ, ಎಡನೀರು ಮೇಳ ಸಹಿತ ತೆಂಕುತಿಟ್ಟಿನ ಪ್ರಖ್ಯಾತ ಮೇಳಗಳಲ್ಲಿ ಭಾಗವತರಾಗಿ ಅವರು ಜನಪ್ರಿಯತೆಯ ಉತ್ತುಂಗ ಕಂಡಿದ್ದರು. ಟೆಂಟ್ ಮೇಳಗಳ ಉನ್ನತಿಯ ಕಾಲದಲ್ಲಿ ಸ್ಟಾರ್ ಭಾಗವತ ಎನಿಸಿಕೊಂಡಿದ್ದರು.
ಭಾವಪ್ರಧಾನ ಪ್ರಸಂಗಗಳ ಗಾಯನಕ್ಕೆ ಹೆಸರುವಾಸಿಯಾಗಿದ್ದ ಅಮ್ಮಣ್ಣಾಯರ ಅಗಲುವಿಕೆ ಅಭಿಮಾನಿಗಳಿಗೆ ಆಘಾತ ತಂದಿದೆ.

