Monday, November 3, 2025

ದೆಹಲಿ ಜನತೆಗೆ ನಿರಾಸೆ: ನಿರೀಕ್ಷಿತ ಫಲ ನೀಡದ ಮೋಡ ಬಿತ್ತನೆ, ಮುಂದುವರಿದಿರುವ ವಾಯುಗುಣಮಟ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೀಪಾವಳಿ ಬಳಿಕ ತೀವ್ರ ಕುಸಿತ ಕಂಡಿದ್ದ ರಾಷ್ಟ್ರ ರಾಜಧಾನಿಯ ವಾಯು ಮಾಲಿನ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ನಡೆಸಿದ್ದ ಮೋಡ ಬಿತ್ತನೆ ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲವಾಗಿದೆ. ಕಾನ್ಪುರ ಐಐಟಿ ಸಹಯೋಗದಲ್ಲಿ ಹಲವಾರೂ ಪರೀಕ್ಷೆಗಳನ್ನು ನಡೆಸಿದರೂ ದೆಹಲಿಯ ಹಲವು ಭಾಗದಲ್ಲಿ ಮಳೆಯಾಗಿಲ್ಲ. ಇದು ನಗರದ ಮಾಲಿನ್ಯವನ್ನು ತಗ್ಗಿಸುವ ಭರವಸೆಯನ್ನು ಹುಸಿ ಮಾಡಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಇಂದು ಬೆಳಗ್ಗೆ 5 ಗಂಟೆಗೆ, ಐಟಿಒ ಸುತ್ತಮುತ್ತಲಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 307 ರಲ್ಲಿ ದಾಖಲಾಗಿದ್ದು, ಇದು ತುಂಬಾ ಕಳಪೆಯಾಗಿದೆ ಮಂಗಳವಾರ ನಡೆಸಿದ ಮೋಡ ಬಿತ್ತನೆಯಿಂದಾಗಿ ಬುಧವಾರ ಎಲ್ಲಿಯೂ ಮಳೆಯಾಗಿಲ್ಲ.

ದೆಹಲಿ ವಾಯು ಮಾಲಿನ್ಯ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ಮುಂದಾಗಲಾಗಿತ್ತು. ಕೃತಕ ಮಳೆಯನ್ನು ಸುರಿಸಲು ತೇವಾಂಶ ತುಂಬಿದ ಮೋಡಗಳಿಗೆ ಬೆಳ್ಳಿ ಅಯೋಡೈಡ್ ಹರಳುಗಳು ಅಥವಾ ಉಪ್ಪು ಆಧಾರಿತ ಸಂಯುಕ್ತಗಳಂತಹ ನಿರ್ದಿಷ್ಟ ಕಣಗಳನ್ನು ಸಿಂಪಡಿಸಲಾಗುತ್ತದೆ. ಇವು ನೀರಿನ ಆವಿ ಘನೀಕರಣಗೊಂಡು ಮಳೆಯ ರೂಪದಲ್ಲಿ ಬೀಳುತ್ತದೆ.

ದೀಪಾವಳಿ ಬಳಿಕ ದೆಹಲಿಯಲ್ಲಿ ಅಕ್ಟೋಬರ್​ 28ರಂದು ಮೋಡ ಬಿತ್ತನೆ ನಡೆಸಲಾಗಿದೆ. ಇಂದು ಕೂಡ ಐಐಟಿ ಕಾನ್ಪುರದ ತಜ್ಞರು ದೆಹಲಿ – ಎನ್‌ಸಿಆರ್‌ನ ವಿವಿಧ ಪ್ರದೇಶಗಳಾದ ಬುರಾರಿ, ಕರೋಲ್ ಬಾಗ್ ಮತ್ತು ಖೇಕ್ರಾದಲ್ಲಿ ಮಿಲಿಟರಿ ವಿಮಾನಗಳನ್ನು ಬಳಸಿಕೊಂಡು ಬಹು ಮೋಡ ಬಿತ್ತನೆ ಪ್ರಯೋಗ ನಡೆಸುವ ಸಾಧ್ಯತೆ ಇದೆ ಎಂದು ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.

ಮೋಡ ಬಿತ್ತನೆಯ ಪ್ರಯತ್ನದ ಹೊರತಾಗಿ ನಿರೀಕ್ಷಿತ ಫಲಿತಾಂಶ ಲಭ್ಯವಾಗಿಲ್ಲ. ಮೋಡಗಳಲ್ಲಿ ಸಾಕಷ್ಟು ತೇವಾಂಶದ ಕೊರತೆಯೇ ಇದಕ್ಕೆ ಕಾರಣ ಎಂದು ಹವಾಮಾನಶಾಸ್ತ್ರಜ್ಞರು ತಿಳಿಸಿದ್ದಾರೆ. ಈಗಾಗಲೇ ಮಳೆ ಬೀಳುವ ಸಾಮರ್ಥ್ಯವನ್ನು ಹೊಂದಿರುವಾಗ ಮಾತ್ರ ಮೋಡ ಬಿತ್ತನೆ ಪರಿಣಾಮಕಾರಿಯಾಗಿರುತ್ತದೆ.

ಮೋಡ ಬಿತ್ತನೆ ಯಶಸ್ವಿಯಾಗಲು ಮೋಡಗಳಲ್ಲಿ ಕನಿಷ್ಠ 40 ರಿಂದ 50ರಷ್ಟು ತೇವಾಂಶ ಹಾಗೂ ಕೆಳ ಹಂತದ ಮೋಡಗಳ ಉಪಸ್ಥಿತಿ ಅಗತ್ಯ. ದೆಹಲಿಯಲ್ಲಿ ಪ್ರಸ್ತುತ ಸುಮಾರು 10,000 ಅಡಿ ಎತ್ತರದಲ್ಲಿ ಮೋಡಗಳಿದ್ದು, ಮೋಡ ಬಿತ್ತನೆ ಕಷ್ಟಕರವಾಗಿದೆ ಎಂದು ಹವಾಮಾನ ತಜ್ಞ ಮಹೇಶ್ ಪಲಾವತ್ ತಿಳಿಸಿದ್ದಾರೆ.

error: Content is protected !!