January18, 2026
Sunday, January 18, 2026
spot_img

ಕಂಬಳ ಅಭಿಮಾನಿಗಳಿಗೆ ನಿರಾಸೆ: ಮೈಸೂರು ದಸರಾದಲ್ಲಿ ಕರಾವಳಿ ಕ್ರೀಡೆಗಿಲ್ಲ ಅವಕಾಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ದಸರಾ ದೇಶವ್ಯಾಪಿ ಖ್ಯಾತಿ ಪಡೆದ ಹಬ್ಬ. ಇಲ್ಲಿ 9 ದಿನಗಳ ಕಾಲ ಸಾಂಪ್ರದಾಯಿಕ ಹಾಗೂ ಜನಪ್ರಿಯ ಕ್ರೀಡೆಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಆದರೆ ಈ ಬಾರಿ ಕರಾವಳಿ ಭಾಗದ ಹೆಮ್ಮೆಯಾದ ಕಂಬಳ ಕ್ರೀಡೆ ಮೈಸೂರಿನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆ ಎದುರಾಗಿದೆ. ರಾಜ್ಯ ಸರ್ಕಾರದಿಂದ ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ.

ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರಿಗೆ ಭೇಟಿ ನೀಡಿದಾಗ, ದಸರಾ ಸಂದರ್ಭದಲ್ಲಿ ಕಂಬಳವನ್ನು ಆಯೋಜಿಸುವುದಾಗಿ ಹೇಳಿದ್ದರು. ಈ ಕಾರಣದಿಂದ ಕರಾವಳಿ ಭಾಗದ ಜನರಿಗೆ ಉತ್ಸಾಹ ಮೂಡಿತ್ತು. ನಮ್ಮ ಪ್ರದೇಶದ ಜನಪ್ರಿಯ ಕ್ರೀಡೆಯನ್ನು ಮೈಸೂರಿನಲ್ಲಿ ಕಣ್ತುಂಬಿಕೊಳ್ಳಬಹುದೆಂದು ಭಾವಿಸಿದ್ದರು. ಆದರೆ ಇದೀಗ ಆ ಕನಸು ನೆರವೇರದೇ ಅಭಿಮಾನಿಗಳಿಗೆ ನಿರಾಶೆಯಾಗಿದೆ.

ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕಂಬಳವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಅದೇ ರೀತಿಯಲ್ಲಿ ದಸರಾದಲ್ಲಿಯೂ ನಡೆಯಬೇಕು ಎಂಬ ಅಭಿಪ್ರಾಯ ಅನೇಕರಿಂದ ವ್ಯಕ್ತವಾಯಿತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ಉತ್ಸವಕ್ಕೆ ಅದರದೇ ಆದ ಸಂಪ್ರದಾಯಗಳಿವೆ, ಹೊಸ ಆಚರಣೆಗಳನ್ನು ಸೇರಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆಂದು ಮೂಲಗಳು ತಿಳಿಸಿವೆ. ಇದರ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತಕ್ಕೂ ಕಂಬಳ ಆಯೋಜನೆಗೆ ಯಾವುದೇ ಸೂಚನೆ ಬಂದಿಲ್ಲ.

ಮೈಸೂರು ದಸರಾ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡಿರುವುದೇ ಅದರ ದೊಡ್ಡ ಆಕರ್ಷಣೆ. ಕಂಬಳದಂತಹ ಕರಾವಳಿ ಕ್ರೀಡೆಗಳು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಪ್ರತಿನಿಧಿಸುತ್ತಿದ್ದರೂ, ದಸರಾ ಉತ್ಸವಕ್ಕೆ ಅವನ್ನು ಸೇರಿಸದ ರಾಜ್ಯ ಸರ್ಕಾರದ ನಿರ್ಧಾರ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಆದರೂ ದಸರಾ ತನ್ನ ಸಾಂಪ್ರದಾಯಿಕ ಭವ್ಯತೆಯೊಂದಿಗೆ ನಡೆಯುವ ವಿಶ್ವಾಸ ಮೈಸೂರಿಗರಲ್ಲಿದೆ.

Must Read

error: Content is protected !!