ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಟ್ಸಾಪ್ ಬಳಕೆದಾರರ ಖಾಸಗಿ ಮಾಹಿತಿಯ ರಕ್ಷಣೆಯ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಕಠಿಣ ನಿಲುವು ತಾಳಿದೆ. ಭಾರತೀಯರ ಡಿಜಿಟಲ್ ಡೇಟಾ ಮೇಲೆ ಯಾವುದೇ ಸಂಸ್ಥೆಗೂ ಅನಾವಶ್ಯಕ ಹಿಡಿತ ಇರಬಾರದು ಎಂದು ಸ್ಪಷ್ಟಪಡಿಸಿರುವ ಕೋರ್ಟ್, ವಾಟ್ಸಾಪ್ ಮಾತೃ ಸಂಸ್ಥೆ ಮೆಟಾಗೆ ತೀವ್ರ ಎಚ್ಚರಿಕೆ ನೀಡಿದೆ.
2021ರಲ್ಲಿ ಜಾರಿಗೆ ಬಂದ ವಾಟ್ಸಾಪ್ ಗೌಪ್ಯತಾ ನೀತಿ ಸಂಬಂಧಿಸಿದ ಅರ್ಜಿಯ ವಿಚಾರಣೆಯ ವೇಳೆ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, “ಭಾರತೀಯ ಬಳಕೆದಾರರ ಗೌಪ್ಯತೆಯನ್ನು ರಕ್ಷಿಸಲು ಸಾಧ್ಯವಿಲ್ಲವೆಂದರೆ ಭಾರತದಲ್ಲಿ ವ್ಯವಹಾರ ನಡೆಸುವ ಅಗತ್ಯವೇ ಇಲ್ಲ” ಎಂದು ಕಿಡಿಕಾರಿತು. ನಮ್ಮ ಸಂವಿಧಾನ ಮತ್ತು ಕಾನೂನುಗಳೇ ಮೊದಲ ಆದ್ಯತೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:
ವಾಟ್ಸಾಪ್ ನೀತಿ ಸಾಮಾನ್ಯ ಜನರಿಗೆ ಅರ್ಥವಾಗದ ರೀತಿಯಲ್ಲಿ ರೂಪಿಸಲಾಗಿದೆ ಎಂಬುದರ ಮೇಲೂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಗ್ರಾಮೀಣ ಪ್ರದೇಶದ ಜನರು, ಬಡವರು ಅಥವಾ ಸ್ಥಳೀಯ ಭಾಷೆಯನ್ನೇ ಮಾತನಾಡುವವರು ಇಂತಹ ಗೋಜಲುಭರಿತ ನೀತಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ಪ್ರಶ್ನೆ ಎತ್ತಿದೆ.
ಚಾಟ್ನಲ್ಲಿ ಔಷಧ ಮಾಹಿತಿ ಹಂಚಿಕೊಂಡ ತಕ್ಷಣ ಸಂಬಂಧಿತ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿರುವುದು ಡೇಟಾ ದುರ್ಬಳಕೆಗೆ ಸೂಚನೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ವಿಚಾರದಲ್ಲಿ ಮೆಟಾ ಸ್ಪಷ್ಟ ಉತ್ತರ ನೀಡಬೇಕಿದೆ ಎಂದು ನ್ಯಾಯಾಲಯ ತಿಳಿಸಿದೆ.



