ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026ರ ಕೇಂದ್ರ ಬಜೆಟ್ ಕುರಿತು ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ವಿರೋಧ ಪಕ್ಷಗಳು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಈ ಬಜೆಟ್ ಸಂಪೂರ್ಣವಾಗಿ ಸಾಮಾನ್ಯ ಜನರ ಹಿತಾಸಕ್ತಿ ಮತ್ತು ದೇಶದ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಈ ಬಜೆಟ್ ‘ವಿಕಸಿತ ಭಾರತ’ಕ್ಕಾಗಿ ಹಳಿ ಏರಿರುವ ‘ರಿಫಾರ್ಮ್ ಎಕ್ಸ್ಪ್ರೆಸ್’ ಇದ್ದಂತೆ. ಬಜೆಟ್ನಲ್ಲಿನ ಎಲ್ಲಾ ಘೋಷಣೆಗಳು ದೇಶದ ಸಾಮಾನ್ಯ ಜನರಿಗಾಗಿ ಇವೆ. ವಿರೋಧ ಪಕ್ಷದವರು ತಮ್ಮನ್ನು ಸಾಮಾನ್ಯ ಜನರು ಎಂದು ಪರಿಗಣಿಸದಿದ್ದರೆ ನಾವೇನು ಮಾಡಲು ಸಾಧ್ಯ?
ದೇಶದಲ್ಲಿ ನಿರ್ಮಾಣವಾಗುವ ಮೂಲಸೌಕರ್ಯಗಳನ್ನು ವಿರೋಧ ಪಕ್ಷದವರು ಬಳಸುವುದಿಲ್ಲವೇ? ಅವರು ಭಾರತೀಯರಲ್ಲವೇ? ಕೇವಲ ರಾಜಕೀಯ ಕಾರಣಕ್ಕಾಗಿ ಅವರು ಬಜೆಟ್ ಅನ್ನು ಟೀಕಿಸುತ್ತಿದ್ದಾರೆ ಎಂದು ರಿಜಿಜು ಕಿಡಿಕಾರಿದ್ದಾರೆ.



