ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಆರ್ಥಿಕತೆ ಮತ್ತು ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 18,509 ಕೋಟಿ ವೆಚ್ಚದ ಮೂರು ಬೃಹತ್ ರೈಲ್ವೆ ಮಲ್ಟಿಟ್ರ್ಯಾಕ್ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಪೈಕಿ ಕರ್ನಾಟಕದ ಬಳ್ಳಾರಿ ಮತ್ತು ಹೊಸಪೇಟೆ ನಡುವಿನ ರೈಲು ಮಾರ್ಗಗಳ ವಿಸ್ತರಣೆ ಅತ್ಯಂತ ಪ್ರಮುಖವಾಗಿದೆ.
ಬಳ್ಳಾರಿ ಮತ್ತು ಹೊಸಪೇಟೆ ನಡುವೆ 3ನೇ ಮತ್ತು 4ನೇ ರೈಲು ಮಾರ್ಗಗಳ ನಿರ್ಮಾಣಕ್ಕೆ 2,372 ಕೋಟಿ ಮೀಸಲಿಡಲಾಗಿದೆ. ಇದರಿಂದ ಈ ಭಾಗದ ಜನರಿಗೆ ಮತ್ತು ಉದ್ಯಮಕ್ಕೆ ದಶಕಗಳ ಕಾಲದ ಸಂಚಾರ ದಟ್ಟಣೆಯ ಸಮಸ್ಯೆಯಿಂದ ಮುಕ್ತಿ ಸಿಗಲಿದೆ.
ಯುನೆಸ್ಕೋ ಪಾರಂಪರಿಕ ತಾಣ ಹಂಪಿ, ವಿಜಯ ವಿಠ್ಠಲ ದೇವಾಲಯ, ತುಂಗಭದ್ರಾ ಅಣೆಕಟ್ಟು, ಬಳ್ಳಾರಿ ಕೋಟೆ ಮತ್ತು ದರೋಜಿ ಕರಡಿ ಅಭಯಾರಣ್ಯಗಳಿಗೆ ರೈಲು ಸಂಪರ್ಕ ಸುಲಭವಾಗಲಿದೆ.
ಗಣಿಗಾರಿಕೆ ಮತ್ತು ಉಕ್ಕು ಉದ್ದಿಮೆಯ ಕೇಂದ್ರವಾಗಿರುವ ಬಳ್ಳಾರಿಯಲ್ಲಿ ಕಬ್ಬಿಣದ ಅದಿರು, ಕಲ್ಲಿದ್ದಲು ಮತ್ತು ಸಿಮೆಂಟ್ ಸಾಗಣೆಗೆ ಹೆಚ್ಚಿನ ಸಾಮರ್ಥ್ಯ ಲಭ್ಯವಾಗಲಿದೆ.
ಸುಮಾರು 3,902 ಹಳ್ಳಿಗಳ 97 ಲಕ್ಷ ಜನರಿಗೆ ಈ ಹೊಸ ಮಾರ್ಗದಿಂದ ನೇರ ಪ್ರಯೋಜನ ಸಿಗಲಿದೆ. ವರ್ಷಕ್ಕೆ ಹೆಚ್ಚುವರಿಯಾಗಿ 96 ಮಿಲಿಯನ್ ಟನ್ ಸರಕು ಸಾಗಣೆ ಮಾಡಲು ಈ ಯೋಜನೆಗಳು ಸಹಕಾರಿಯಾಗಲಿವೆ.



