ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆಯಲ್ಲಿ ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಆರೋಪ ಪ್ರತಿಧ್ವನಿಸಿದ್ದು, ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಗ್ರಹ ಮಾಡಿದ್ದಾರೆ.
ನಿಯಮ 69ರ ಅಡಿಯಲ್ಲಿ ಈ ಕುರಿತು ಚರ್ಚೆ ಆರಂಭಿಸಿದ ಅಶೋಕ್, ಅಬಕಾರಿ ಇಲಾಖೆಯಲ್ಲಿ ದೊಡ್ಡ ಮಟ್ಟದ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದರು.
ಸದನದಲ್ಲಿ ಪೆನ್ಡ್ರೈವ್ ಪ್ರದರ್ಶಿಸಿದ ಅಶೋಕ್, “ಹೊಸ ಸನ್ನದು ಪಡೆಯಲು ಸಚಿವರು ಅಥವಾ ಅವರ ಮಗನನ್ನು ಸಂಪರ್ಕಿಸಬೇಕು ಎಂಬ ಆಡಿಯೋ ವೈರಲ್ ಆಗಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ,” ಎಂದರು. ತನಿಖೆ ಮುಗಿಯುವವರೆಗೆ ಸಚಿವರು ಅಧಿಕಾರದಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ಒತ್ತಾಯಿಸಿದ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ವಾಕ್ಸಮರ ನಡೆದು ಸದನದಲ್ಲಿ ಕೋಲಾಹಲ ಉಂಟಾಯಿತು.



