ಹೊಸದಿಗಂತ ಡಿಜಿಟಲ್ ಡೆಸ್ಕ್
ಬರುವ ಯುಗಾದಿಗೂ ಮುನ್ನವೇ ಆಕಾಶದಲ್ಲಿ ಕೇತುಗ್ರಸ್ತ ಚಂದ್ರಗ್ರಹಣದ ವಿದ್ಯಮಾನ ಜರುಗಲಿದ್ದು, ಇದರ ಪರಿಣಾಮವಾಗಿ ಬೆಂಗಳೂರಿನ ಹಲವು ಐತಿಹಾಸಿಕ ದೇವಾಲಯಗಳ ದರ್ಶನದ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಹಣದ 6 ಗಂಟೆಗಳ ಮುಂಚೆಯೇ ‘ಸೂತಕ’ ಆರಂಭವಾಗುವುದರಿಂದ, ಧಾರ್ಮಿಕ ವಿಧಿವಿಧಾನಗಳ ಹಿನ್ನೆಲೆಯಲ್ಲಿ ದೇವಸ್ಥಾನಗಳ ಬಾಗಿಲು ಮುಚ್ಚಲು ನಿರ್ಧರಿಸಲಾಗಿದೆ.
ಗವಿಗಂಗಾಧರೇಶ್ವರ ದೇವಾಲಯ: ಮಂಗಳವಾರ ಬೆಳಿಗ್ಗೆ 9 ಗಂಟೆಗೇ ದೇವಸ್ಥಾನ ಬಂದ್ ಆಗಲಿದ್ದು, ಗ್ರಹಣದ ನಂತರ ಅಂದರೆ ಸಂಜೆ 7.45ರ ಬಳಿಕವಷ್ಟೇ ಪುನಃ ತೆರೆಯಲಿದೆ. ಗ್ರಹಣವು ಹೋಳಿ ಹುಣ್ಣಿಮೆಯಂದೇ ಇರುವುದರಿಂದ ಅಗ್ನಿ ಅವಘಡಗಳ ಸಾಧ್ಯತೆಯಿದೆ ಎಂದು ಪ್ರಧಾನ ಅರ್ಚಕರು ಎಚ್ಚರಿಸಿದ್ದಾರೆ. ಲೋಕಕಲ್ಯಾಣಕ್ಕಾಗಿ ಮಾರ್ಚ್ 4ರಂದು ಇಲ್ಲಿ ‘ಗ್ರಹಣ ಶಾಂತಿ ಹೋಮ’ ಹಮ್ಮಿಕೊಳ್ಳಲಾಗಿದೆ.
ಕಾಡು ಮಲ್ಲೇಶ್ವರ ದೇವಾಲಯ: ಮಧ್ಯಾಹ್ನ 3.10ರಿಂದ ಗ್ರಹಣ ಆರಂಭವಾಗುವ ಹಿನ್ನೆಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಾಗುವುದು. ರಾತ್ರಿ 7.30ಕ್ಕೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ಕೆಲವು ರಾಶಿಯವರಿಗೆ ದೋಷ ಪರಿಹಾರಕ್ಕಾಗಿ ಮರುದಿನ ‘ನವಗ್ರಹ ಶಾಂತಿ ಹೋಮ’ ಹಮ್ಮಿಕೊಳ್ಳಲಾಗಿದ್ದು, ಅಕ್ಕಿ ಹಾಗೂ ಹುರುಳಿಕಾಳು ದಾನ ಮಾಡುವಂತೆ ಭಕ್ತರಲ್ಲಿ ವಿನಂತಿಸಲಾಗಿದೆ.
ದೊಡ್ಡ ಗಣೇಶ ದೇಗುಲ: ಬಸವನಗುಡಿಯ ದೊಡ್ಡ ಗಣೇಶನ ದರ್ಶನದಲ್ಲೂ ವ್ಯತ್ಯಯವಿದ್ದು, ಸಂಜೆ 5.30ರ ಬದಲಾಗಿ ಗ್ರಹಣ ಮುಕ್ತಾಯದ ನಂತರ ಅಂದರೆ ರಾತ್ರಿ 7.45ಕ್ಕೆ ಭಕ್ತರಿಗಾಗಿ ದೇವಸ್ಥಾನದ ಬಾಗಿಲು ತೆರೆಯಲಿದೆ.



