March 13, 2026
Friday, March 13, 2026
spot_img

ಜಾತಿ ಸಮೀಕ್ಷೆಗೆ ಗಣ್ಯರ ಅಸಹಕಾರ: ಮೂರ್ತಿ ದಂಪತಿ ಬಳಿಕ ಹಿರಿಯ IAS ಅಧಿಕಾರಿಯೂ ನಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಜಾತಿ ಸಮೀಕ್ಷೆ ಅಂತಿಮ ಹಂತ ತಲುಪಿ ಗಣತಿಕಾರ್ಯ ಭರದಿಂದ ಸಾಗುತ್ತಿದ್ದರೂ, ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳಿಂದಲೇ ಅಸಹಕಾರ ಎದುರಾಗುತ್ತಿರುವುದು ಒಂದೊಂದಾಗಿ ವರದಿಯಾಗುತ್ತಿದೆ. ಇತ್ತೀಚೆಗೆ ಇನ್ಫೋಸಿಸ್​​ ಮುಖ್ಯಸ್ಥ ನಾರಾಯಣ ಮೂರ್ತಿ ಹಾಗೂ ಸುಧಾ ನಾರಾಯಣ ಮೂರ್ತಿ ದಂಪತಿ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ ಬೆನ್ನಲ್ಲೇ, ಈಗ ಆ ಸಾಲಿಗೆ ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಸೇರ್ಪಡೆಯಾಗಿದ್ದಾರೆ.

ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತರಾಗಿರುವ ಮುನೀಶ್ ಮೌದ್ಗಿಲ್ ಅವರ ಮನೆಗೆ ಸಮೀಕ್ಷೆಗಾಗಿ ತೆರಳಿದ್ದ ಸಿಬ್ಬಂದಿಗೆ ನಿರಾಶೆಯಾಗಿದೆ. ಸಿಬ್ಬಂದಿ ಮೂರು ಬಾರಿ ಮನೆಗೆ ಭೇಟಿ ನೀಡಿದರೂ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲ. ಮನೆಯ ಕಾಲಿಂಗ್​ ಬೆಲ್​ ಮಾಡಿದಾಗ ಯಾರೂ ಬಾಗಿಲು ತೆರೆಯದ ಕಾರಣ, ಸಿಬ್ಬಂದಿ ಸಂದೇಶ ಕಳುಹಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಮುನೀಶ್ ಮೌದ್ಗಿಲ್, “ಪ್ರತಿಕ್ರಿಯೆ ನೀಡಿಲ್ಲ ಎಂದು ಅಪ್​ಡೇಟ್ ಮಾಡಿ” ಎಂದು ಹೇಳಿದ್ದಾರೆ.

ಸಮೀಕ್ಷೆ ಕಡ್ಡಾಯವಲ್ಲ, ಗೌಪ್ಯತೆ ಕಾಯ್ದುಕೊಳ್ಳಬೇಕು
ಸೆಪ್ಟೆಂಬರ್ 22 ರಿಂದ ರಾಜ್ಯದಲ್ಲಿ ಆರಂಭವಾಗಿರುವ ಜಾತಿ ಗಣತಿಯ ವಿಚಾರವು ಕರ್ನಾಟಕ ಹೈಕೋರ್ಟ್ ಮೆಟ್ಟಿಲನ್ನೂ ಏರಿತ್ತು. ಈ ಕುರಿತು ಮಧ್ಯಂತರ ಆದೇಶ ನೀಡಿದ್ದ ನ್ಯಾಯಾಲಯವು, ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿತ್ತು. ಅಲ್ಲದೆ, ಸಮೀಕ್ಷಕರು ಮಾಹಿತಿ ನೀಡುವಂತೆ ಬಲವಂತ ಮಾಡುವಂತಿಲ್ಲ ಹಾಗೂ ಸಂಗ್ರಹಿಸಲಾದ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಬೇಕು ಎಂದು ಸೂಚಿಸಿತ್ತು. ನ್ಯಾಯಾಲಯದ ಈ ಆದೇಶದಿಂದಾಗಿ ಹಲವರು ಮಾಹಿತಿ ನೀಡಲು ನಿರಾಕರಿಸುತ್ತಿರುವುದು ವರದಿಗಳ ಮೂಲಕ ಬೆಳಕಿಗೆ ಬರುತ್ತಿದೆ.

‘ಹಿಂದುಳಿದ ಜಾತಿಗೆ ಸೇರಿಲ್ಲ, ಸರ್ಕಾರಕ್ಕೆ ಉಪಯೋಗವಿಲ್ಲ’ ಎಂದ ಮೂರ್ತಿ ದಂಪತಿ
ಈ ಹಿಂದೆ ನಾರಾಯಣ ಮೂರ್ತಿ ಹಾಗೂ ಸುಧಾ ನಾರಾಯಣ ಮೂರ್ತಿ ದಂಪತಿ ಕೂಡ ಸಮೀಕ್ಷೆಗೆ ಅಸಹಕಾರ ತೋರಿತ್ತು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದ್ದ ಅವರು, “ಕೆಲವು ವೈಯಕ್ತಿಕ ಕಾರಣಗಳಿಂದ ನಾವು ಮಾಹಿತಿ ನೀಡಲು ನಿರಾಕರಿಸುತ್ತಿದ್ದೇವೆ. ನಾವು ಹಿಂದುಳಿದ ಯಾವ ಜಾತಿಗೆ ಸೇರುವುದಿಲ್ಲ. ಆದ್ದರಿಂದ ಈ ಸಮೀಕ್ಷೆ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ” ಎಂದು ಉಲ್ಲೇಖಿಸಿದ್ದರು.

ಸಮೀಕ್ಷಾ ಕಾರ್ಯವು ಕೊನೆಯ ಹಂತದಲ್ಲಿದ್ದರೂ, ರಾಜ್ಯದ ಪ್ರಮುಖ ಗಣ್ಯ ವ್ಯಕ್ತಿಗಳು ನೀಡುತ್ತಿರುವ ಈ ಅಸಹಕಾರವು ಗಣತಿಕಾರ್ಯದ ಸಂಪೂರ್ಣತೆಗೆ ಅಡ್ಡಿಯಾಗುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !