ಹೊಸದಿಗಂತ ವರದಿ, ಕಲಬುರಗಿ:
ಸಾಮಾಜಿಕ ಸೌಹಾರ್ದತೆ ಮತ್ತು ಸಾಂಸ್ಕೃತಿಕ ಗುರುತನ್ನು ಹಾಳುಗೆಡುವ ಯಾವುದೇ ಚಟುವಟಿಕೆಗಳ ವಿರುದ್ಧ ಹಿಂದು ಸಮಾಜ ಎಚ್ಚರಿಕೆಯಿಂದ ಇರಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಸಂಘಟನಾ ಮಹಾಮಂತ್ರಿ ಮಿಲಿಂದ್ ಪರಾಂಡೆ ತಿಳಿಸಿದರು.
ನಗರದ ಸೇಡಂ ರಸ್ತೆಯ ಎಂಆರ್ಎಂಸಿ ಸ್ಯಾಕ್ ಕಟ್ಟಡ ಸಿಪಿಎಂ ಹಾಸ್ಟೆಲ್ ಕ್ಯಾಂಪಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಶೋಷಣೆ ಮತ್ತು ಅಪರಾಧಗಳ ಘಟನೆಗಳು ತೀವ್ರ ಖಂಡನೀಯವಾಗಿದ್ದು, ತಕ್ಷಣವೇ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಇದರ ಜೊತೆಗೆ ಎಫ್ಐಆರ್ ದಾಖಲಿಸುವಲ್ಲಿ ಪೋಲಿಸ್ ಇಲಾಖೆಯ ವಿಳಂಬ ನೀತಿ ಮತ್ತು ನಿರ್ಲಕ್ಷ್ಯ ಅತ್ಯಂತ ಚಿಂತಾಜನಕವಾಗಿದ್ದು, ಕಾನೂನು ಕ್ರಮಗಳಲ್ಲಿ ಯಾವುದೇ ರೀತಿಯ ವಿಳಂಬವೂ ನ್ಯಾಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಪೀಡಿತರು ಮುಂದೆ ಬರಲು ಹಿಂಜರಿಯುವಂತೆ ಮಾಡುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ಗೌರವಾಧ್ಯಕ್ಷ ಲಿಂಗರಾಜ ಅಪ್ಪ, ಕಾರ್ಯದರ್ಶಿ ಶಿವಕುಮಾರ್ ಬೋಳಶೆಟ್ಟಿ, ಪುಂಡಲಿಕ ದಳವಾಯಿ, ದೀಪಕ್ ಸೇರಿದಂತೆ ಇತರರು ಇದ್ದರು.



