ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಸಂಸ್ಥೆ- ತಂಡದ ನಿರ್ಧಾರವು ಗೌರವಾನ್ವಿತ ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈ ಕೋರ್ಟ್ ನ ಕಟ್ಟುನಿಟ್ಟಾದ ನಿರ್ದೇಶನದ ಅನ್ವಯ ತೆಗೆದುಕೊಂಡ ತೀರ್ಮಾನವೇ ವಿನಾ ಅದು ನಾವಾಗಿಯೇ ಮಾಡಿದ ನಿರ್ಧಾರವಲ್ಲ ಎಂದು ವಂತಾರಾದಿಂದ ತಿಳಿಸಲಾಗಿದೆ.
36 ವರ್ಷದ ಹೆಣ್ಣಾನೆ ಮಾಧುರಿಯು (ಮಹದೇವಿ ಅಂತಲೂ ಕರೆಯಲಾಗುತ್ತದೆ) ಮೂವತ್ಮೂರು ವರ್ಷಗಳ ಕಾಲ ಕೊಲ್ಹಾಪುರದ ನಾಂದಣಿ ಜೈನ ಮಠದಲ್ಲಿ ಕಳೆದಿತ್ತು. ಆ ಆನೆಯನ್ನು ಸ್ಥಳೀಯರು ಸಾಂಸ್ಕೃತಿಕ ಪ್ರತೀಕವಾಗಿ ಕಾಣುತ್ತಾರೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಮಾಧುರಿಯನ್ನು ಜೈನಮಠದಿಂದ ಜಾಮ್ ನಗರದಲ್ಲಿನ ವನತಾರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಈ ಬೆಳವಣಿಗೆಯ ನಂತರದಲ್ಲಿ ವನತಾರದ ಬಗ್ಗೆ ಹಾಗೂ ರಿಲಯನ್ಸ್ ಬಗ್ಗೆ ಜನರು ತಮ್ಮ ಸಿಟ್ಟು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಆ ಹಿನ್ನೆಲೆಯಲ್ಲಿ ವಂತಾರಾದಿಂದ ಸ್ಪಷ್ಟನೆ ನೀಡಲಾಗಿದೆ.
ಮಾಧುರಿ ಆರೋಗ್ಯ ಚೆನ್ನಾಗಿಲ್ಲ ಎಂದು ‘ಪೆಟಾ’ದಿಂದ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಮಾಧುರಿ ಪುನರ್ವಸತಿಗೆ ಆದೇಶ ನೀಡಿತ್ತು. ಆ ನಂತರದಲ್ಲಿ ಸುಪ್ರೀಂ ಕೋರ್ಟ್ ಸಹ ಈ ತೀರ್ಮಾನವನ್ನು ಎತ್ತಿಹಿಡಿದಿತ್ತು.
ಸದ್ಯಕ್ಕೆ ಜಾಮ್ ನಗರದಲ್ಲಿ ಇರುವಂಥ ರಾಧೆಕೃಷ್ಣ ದೇಗುಲ ಆನೆ ಕಲ್ಯಾಣ ಟ್ರಸ್ಟ್ ನಲ್ಲಿ ವಂತಾರಾದಿಂದ ಮಾಧುರಿಯ ಆರೈಕೆ ಮಾಡಲಾಗುತ್ತಿದೆ. ಆದರೆ ಯಾವಾಗ ಜೈನಮಠದಿಂದ ಹೆಣ್ಣಾನೆ ಮಾಧುರಿಯನ್ನು ಸ್ಥಳಾಂತರಿಸಲಾಯಿತೋ ಆಗಿನಿಂದ ಭಕ್ತರು ಹಾಗೂ ಸ್ಥಳೀಯ ನಾಯಕರಿಂದ ಪ್ರತಿಭಟನೆ ಆಗುತ್ತಾ ಇದೆ. ಈ ಹಿನ್ನೆಲೆಯಲ್ಲಿ ವಂತಾರಾದಿಂದ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.
ಮಾಧುರಿಯ ಬಗ್ಗೆ ಇರುವಂಥ ಆಳವಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಭಾವನಾತ್ಮಕ ನಂಟನ್ನು ವಂತಾರಾ ಗೌರವಿಸುತ್ತದೆ. ಇದೀಗ ಆ ಹೆಣ್ಣಾನೆ ಜೈನಮಠಕ್ಕೆ ವಾಪಸಾಗುವುದಕ್ಕೆ ಬೇಕಾಗುವಂಥ ಯಾವುದೇ ಕಾನೂನಿಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸುವುದಕ್ಕೆ ಬೆಂಬಲ ನೀಡಲು ಸಿದ್ಧವಾಗಿರುವುದಾಗಿ ತಿಳಿಸಿದೆ.
‘ಯಾವುದೇ ಹಂತದಲ್ಲೂ ವನತಾರದಿಂದ ಈ ಸ್ಥಳಾಂತರವನ್ನು ಪ್ರಾರಂಭಿಸಲಿಲ್ಲ ಅಥವಾ ಶಿಫಾರಸು ಮಾಡಲಿಲ್ಲ, ಅಥವಾ ಧಾರ್ಮಿಕ ಆಚರಣೆ ಅಥವಾ ಭಾವನೆಗೆ ಅಡ್ಡಿಪಡಿಸುವ ಯಾವುದೇ ಉದ್ದೇಶವೂ ಇರಲಿಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೊಲ್ಹಾಪುರದ ನಾಂದಣಿ ಪ್ರದೇಶದಲ್ಲಿ ಮಾಧುರಿಗಾಗಿ ಸ್ಯಾಟಲೈಟ್ ಪುನರ್ವಸತಿ ಕೇಂದ್ರವನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಸಹ ಹೇಳಿಕೆಯಲ್ಲಿ ವಿವರಿಸಲಾಗಿದೆ, ಇದು ನ್ಯಾಯಾಲಯದ ಅನುಮೋದನೆಗೆ ಒಳಪಟ್ಟಿರುತ್ತದೆ. ಪ್ರಸ್ತಾವಿತ ಸೌಲಭ್ಯವು ಸರಪಳಿ-ಮುಕ್ತ ಆವರಣಗಳು, ಜಲಚಿಕಿತ್ಸಾ ಪೂಲ್ಗಳು, ಪಶುವೈದ್ಯಕೀಯ ಆರೈಕೆ ಮತ್ತು ಮಾಧುರಿಯ ದೀರ್ಘಕಾಲೀನ ಯೋಗಕ್ಷೇಮಕ್ಕಾಗಿ ವಿನ್ಯಾಸಗೊಳಿಸಲಾದ ಸ್ಥಳಗಳನ್ನು ಒಳಗೊಂಡಿರುತ್ತದೆ.
ಅನುಮೋದನೆ ದೊರೆತರೆ, ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಜೈನ ಮಠ ಮತ್ತು ಮಹಾರಾಷ್ಟ್ರ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುವುದಾಗಿ ವಂತರಾ ಹೇಳಿದೆ. ಈ ಪ್ರಸ್ತಾವನೆಯನ್ನು ಹೆಸರು ಬರಬೇಕು ಅಂತಲೋ ಅಥವಾ ಮನ್ನಣೆಗಾಗಿ ಮಾಡಿಲ್ಲ. ಜೈನ ಮಠವು ಮುಂದಿಡಬಹುದಾದ ಪರ್ಯಾಯಗಳಿಗೆ ಇದು ಮುಕ್ತವಾಗಿದೆ ಎಂದು ಹೇಳಲಾಗಿದೆ.
ಕಾನೂನು ಸೂಚನೆಗಳ ಅಡಿಯಲ್ಲಿ ಮಾತ್ರ ನಮ್ಮ ತೊಡಗಿಕೊಳ್ಳುವಿಕೆ ಇದೆ. ಜೈನ ಸಮುದಾಯ ಅಥವಾ ಕೊಲ್ಹಾಪುರದ ಜನರಿಗೆ ಯಾವುದೇ ತೊಂದರೆ ಉಂಟು ಮಾಡಿದ್ದರೆ ನಾವು ಪ್ರಾಮಾಣಿಕ ವಿಷಾದವನ್ನು ವ್ಯಕ್ತಪಡಿಸುತ್ತೇವೆ. ಮಿಚಾಮಿ ದುಕ್ಕದಂ – ಆಲೋಚನೆ, ಮಾತು ಅಥವಾ ಕಾರ್ಯದ ಮೂಲಕ ತಿಳಿದೋ ಅಥವಾ ತಿಳಿಯದೆಯೋ ಯಾವುದೇ ನೋವು ಉಂಟಾಗಿದ್ದರೆ, ನಾವು ನಿಮ್ಮ ಕ್ಷಮೆಯನ್ನು ಕೋರುತ್ತೇವೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬುಧವಾರ ಮುಂಬೈನಲ್ಲಿ ವಂತಾರಾ ತಂಡವನ್ನು ಭೇಟಿಯಾದರು. ವಂತರಾದಿಂದ ನ್ಯಾಯಾಲಯದ ಆದೇಶಗಳನ್ನು ಪಾಲಿಸುತ್ತಿದ್ದೇವೆ ಮತ್ತು ಆನೆಯನ್ನು ನಮ್ಮ ವಶಕ್ಕೆ ಪಡೆಯುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಪುನರುಚ್ಚರಿಸಲಾಗಿದೆ.