ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಾ ಸಾಗಿದ್ದು, ಬಂಗ್ಲೆಗುಡ್ಡ ಅರಣ್ಯ ಪ್ರದೇಶಕ್ಕೆ ಅರಣ್ಯ ಅಧಿಕಾರಿಗಳ ತಂಡ ಭೇಟಿ ನೀಡಿದೆ.
ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಇಲ್ಲಿಗೆ ಭೇಟಿ ನೀಡಿದ್ದು, ಮುಂದಿನ ಹಂತವಾಗಿ ಈ ಭಾಗದ ಕಾಡು ಪ್ರದೇಶದ ವಿಸ್ತಾರ ಹಾಗೂ ಇಲ್ಲಿರುವ ಮರಗಳ ಬಗ್ಗೆ ಸರ್ವೇ ನಡೆಯಲಿದೆ. ಬಳಿಕ ಇದರ ವರದಿಯನ್ನು ಅರಣ್ಯಾಧಿಕಾರಿಗಳು ಎಸ್ಐಟಿಗೆ ನೀಡಲಿದ್ದಾರೆ.
ಸರ್ವೇ ಸಂದರ್ಭ ಕಾಡಿನೊಳಗೆ ಭೂಮಿ ಮೇಲ್ಭಾಗದಲ್ಲಿ ಮಾನವ ಅಸ್ಥಿಪಂಜರಗಳು ಕಾಣುತ್ತವೆಯೇ ಎಂಬ ಬಗ್ಗೆಯೂ ಸರ್ವೇ ನಿರತರು ಗಮನ ಹರಿಸಲಿದ್ದಾರೆ. ಸೌಜನ್ಯಾಳ ಸಂಬಂಧಿ ವಿಠಲ ಗೌಡ ಇದೇ ಕಾಡಿನಿಂದ ಈ ಹಿಂದೆ ತಲೆ ಬುರುಡೆ ತಂದಿದ್ದೆ ಎಂದು ಹೇಳಿಕೆ ನೀಡಿದ್ದರಲ್ಲದೆ ಮಹಜರು ವೇಳೆಯೂ ಅಧಿಕಾರಿಗಳಿಗೆ ಅಸ್ಥಿಪಂಜರಗಳನ್ನು ತೋರಿಸಿದ್ದಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್ಐಟಿ ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳು ಇದ್ದಲ್ಲಿ ಸಂಗ್ರಹಿಸುವ ನಿರ್ಧಾರ ಮಾಡಿತ್ತು. ಇದರ ಬೆನ್ನಿಗೇ ಈಗ ಅರಣ್ಯಾಧಿಕಾರಿಗಳೂ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ.