ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾತ್ಮ ಗಾಂಧಿಯವರ ಬೋಧನೆಗಳು ಇಂದು ಎಂದಿಗಿಂತಲೂ ಹೆಚ್ಚು ಅಗತ್ಯವಿದೆ ಎಂದು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅಭಿಪ್ರಾಯಪಟ್ಟರು.
ಇಂದು ಪ್ರಧಾನಿ ಮೋದಿ ಅವರೊಂದಿಗೆ ಗುಜರಾತ್ನ ಅಹಮದಾಬಾದ್ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಅವರು ಮಹಾತ್ಮ ಗಾಂಧಿಗೆ ಗೌರವ ನಮನ ಸಲ್ಲಿಸಿದರು. ಇದಕ್ಕೂ ಕೆಲವು ನಿಮಿಷಗಳ ಮುನ್ನ ಆಶ್ರಮಕ್ಕೆ ಆಗಮಿಸಿದ್ದ ಮೋದಿ, ಚಾನ್ಸೆಲರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ರಾಷ್ಟ್ರಪಿತ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಇಬ್ಬರೂ ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಮತ್ತು ಅವರ ಪತ್ನಿ ಕಸ್ತೂರ್ಬಾ ವಾಸಿಸುತ್ತಿದ್ದ ಆಶ್ರಮದೊಳಗಿನ ಕೊಠಡಿ ‘ಹೃದಯ ಕುಂಜ್’ಗೆ ಭೇಟಿ ಕೊಟ್ಟರು. ಆಶ್ರಮದಲ್ಲಿ ‘ಚರಖ’ ಅಥವಾ ನೂಲುವ ಚಕ್ರ ಬಳಸಿ ಖಾದಿ ನೂಲನ್ನು ಹೇಗೆ ನೇಯಲಾಗುತ್ತದೆ ಎಂಬುದನ್ನು ಮೆರ್ಜ್ ಕುತೂಹಲದಿಂದ ವೀಕ್ಷಿಸಿದರು.
ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಚಾನ್ಸೆಲರ್ ಮೆರ್ಜ್, ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಘನತೆಯ ಶಕ್ತಿಯ ಬಗ್ಗೆ ಮಹಾತ್ಮ ಗಾಂಧಿಯವರಿಗಿದ್ದ ಅಚಲ ನಂಬಿಕೆ ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತದೆ. ಗಾಂಧಿಯವರ ಬೋಧನೆಗಳು ಭಾರತೀಯರು ಮತ್ತು ಜರ್ಮನ್ನರನ್ನು ಸ್ನೇಹಿತರನ್ನಾಗಿ ಒಂದುಗೂಡಿಸುತ್ತದೆ ಎಂದು ಬರೆದಿದ್ದಾರೆ.
ಐತಿಹಾಸಿಕ ಆಶ್ರಮದಲ್ಲಿ ಗೌರವ ನಮನ ಸಲ್ಲಿಸಿದ ಬಳಿಕ ಇಬ್ಬರೂ ನಾಯಕರು ಸಬರಮತಿ ನದಿ ದಂಡೆಯತ್ತ ತೆರಳಿದರು. ಅಲ್ಲಿ ಮೋದಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ-2026 ಉದ್ಘಾಟಿಸಿದರು. ಬಳಿಕ ಚಾನ್ಸೆಲರ್ ಮೆರ್ಜ್ ಅವರೊಂದಿಗೆ ಗಾಳಿಪಟ ಹಾರಾಟವನ್ನು ಆನಂದಿಸಿದರು.



