February 19, 2026
Thursday, February 19, 2026
spot_img

ಬ್ರಿಟಿಷರ ಕಾಲದಲ್ಲಿಯೇ ಗಣೇಶ ಮೆರವಣಿಗೆಗೆ ಸ್ವಾತಂತ್ರ್ಯ ಇತ್ತು, ಈಗ ಇಲ್ಲ: ಕೆ.ಸುಧಾಕರ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೆರವಣಿಗೆಯಲ್ಲಿ ನಡೆದ ಕಲ್ಲು ತೂರಾಟದ ಘಟನೆ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಾ. ಕೆ. ಸುಧಾಕರ್, ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು. ಬ್ರಿಟಿಷರ ಕಾಲದಲ್ಲಿಯೇ ಗಣೇಶ ಮೆರವಣಿಗೆಗೆ ಸ್ವಾತಂತ್ರ್ಯ ಇತ್ತು, ಆದರೆ ಇಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದು ಹಬ್ಬಗಳಿಗೆ ನಿರ್ಬಂಧ ಹೇರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು, ಹಿಂದುಗಳು ಶಾಂತಿಯುತವಾಗಿ ಹಬ್ಬ ಆಚರಿಸಿದರೂ ಅನುಮತಿ ಕೊಡದೆ ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿದರು. ಒಂದು ಸಮುದಾಯಕ್ಕೆ ಎಲ್ಲ ಸೌಲಭ್ಯ, ಪರವಾನಗಿ ನೀಡಲಾಗುತ್ತಿದೆ. ಆದರೆ ಬಹುಸಂಖ್ಯಾತ ಹಿಂದುಗಳ ಹಬ್ಬದ ಸಮಯದಲ್ಲಿ ಮಾತ್ರ ನಿರ್ಬಂಧ ಹೇರಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದಲ್ಲದೆ, ಭದ್ರಾವತಿಯಲ್ಲಿ ನಡೆದ “ಪಾಕಿಸ್ತಾನ ಜಿಂದಾಬಾದ್” ವಿವಾದಕ್ಕೂ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿರುವವರೆಗೆ ಭಾರತಕ್ಕೆ ಅಪಾಯ ಹೆಚ್ಚುತ್ತದೆ ಎಂದು ಎಚ್ಚರಿಸಿದರು. ಇಂತಹ ಘೋಷಣೆಗಳನ್ನು ನೀಡುವವರನ್ನು ದೇಶದ್ರೋಹಿಗಳೆಂದು ಕರೆಯಬೇಕಾಗಿದೆ. ಸರ್ಕಾರ ಕಾನೂನಿನ ಭಯವಿಲ್ಲದಂತೆ ವರ್ತಿಸುವವರಿಗೆ ಬೆಂಬಲ ನೀಡುತ್ತಿದೆ ಎಂದು ಟೀಕಿಸಿದರು.

ಉಪರಾಷ್ಟ್ರಪತಿ ಚುನಾವಣೆ ಕುರಿತು ಮಾತನಾಡಿದ ಅವರು, ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರಿಗೆ ಸಂಸದರ ಏಕಮತ ಬೆಂಬಲವಿದ್ದು, ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !