ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕುರ್ಚಿ ಕದನ ಜೋರಾಗಿ ನಡೆಯುತ್ತಿದ್ದು, ಇದರ ನಡುವೆ ಕಾಂಗ್ರೆಸ್ ಶಾಸಕರು ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ.
ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಈ ಪತ್ರವನ್ನು ಬರೆಯಲಾಗಿದೆ. ಪತ್ರದಲ್ಲಿ ದಿನಾಂಕ ಉಲ್ಲೇಖ ಮಾಡಿಲ್ಲ. ಸಚಿವ ಸಂಪುಟ ಪುನಾರಚನೆಗಾಗಿ ಮೊದಲ ಬಾರಿಗೆ ಗೆದ್ದಿರು 31 ಶಾಸಕರು ಒತ್ತಾಯ ಮಾಡಿದ್ದು, ಶಾಸಕರ ಸಹಿ ಇರುವ ಪತ್ರ ಈಗ ವೈರಲ್ ಆಗಿದೆ.
ಕಾಂಗ್ರೆಸ್ನಿಂದ ಮೊದಲ ಬಾರಿ 38 ಶಾಸಕರು ಆಯ್ಕೆಯಾಗಿದ್ದಾರೆ. ಮೊದಲ ಬಾರಿ ಗೆದ್ದವರಿಗೆ ಸಚಿವ ಸ್ಥಾನ ನೀಡಿ ಜನಾದೇಶಕ್ಕೆ ಮನ್ನಣೆ ನೀಡಿ. ಯುವಕರಿಗೆ ಅವಕಾಶ ನೀಡುವುದು ಈ ಕ್ಷಣದ ಬೇಡಿಕೆಯಾಗಿದೆ. ಹೊಸಬರಿಗೆ ಅವಕಾಶ ನೀಡಿದರೆ ಮುಂದಿನ ಚುನಾವಣೆ ಗೆಲ್ಲಲು ಸಹಕಾರಿಯಾಗಲಿದೆ. ಪಕ್ಷ ನಿಷ್ಠೆ, ಸೈದ್ದಾಂತಿಕವಾಗಿ ಗಟ್ಟಿಯಾಗಿರುವವರಿಗೆ ಅವಕಾಶ ನೀಡಿ ಎಂದು ಶಾಸಕರು ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ.
ನಾವು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ಧರಾಗಿದ್ದೇವೆ. 2028 ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ಬರಬೇಕಾಗಿದೆ. ಹಾಗಾಗಿ ಸಂಪುಟದಲ್ಲಿ ಯುವ ಮುಖಗಳಿಗೆ ಅವಕಾಶ ನೀಡಬೇಕು ಎಂದು ಉಲ್ಲೇಖ ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಾಮನಗರದ ಶಾಸಕ ಇಕ್ಬಾಲ್ ಹುಸೇನ್, ನಾನು ಪತ್ರಕ್ಕೆ ಸಹಿ ಮಾಡಿದ್ದು ನಿಜ. 30 ರಿಂದ 40 ಶಾಸಕರು ಸಹಿ ಮಾಡಿದ್ದೇವೆ. ಈಗಿನ ಸಚಿವರಿಂದ ಕೆಲಸ ಆಗುತ್ತಿಲ್ಲ. ಇಚ್ಛೆ ಇದ್ದವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಶಾಸಕರಾದ ಎ.ಎಸ್.ಪೊನ್ನಣ್ಣ, ಭೀಮಸೇನ ಚಿಮ್ಮನಕಟ್ಟಿ, ಪ್ರದೀಪ್ ಈಶ್ವರ್, ಇಕ್ಬಾಲ್ ಹುಸೇನ್, ಎನ್.ಟಿ.ಶ್ರೀನಿವಾಸ, ಅಶೋಕ್ ಕುಮಾರ್ ರೈ, ಎನ್.ಶ್ರೀನಿವಾಸ, ದರ್ಶನ್ ಧ್ರುವನಾರಾಯಣ, ಶಿವಗಂಗಾ ಬಸವರಾಜು, ವಿಶ್ವಾಸ್ ವೈದ್ಯ, ನಾರಾ ಭರತ್ ರೆಡ್ಡಿ, ಪ್ರಕಾಶ್ ಕೋಳಿವಾಡ, ಕೆ.ಎಸ್.ಆನಂದ, ಮಂಥರ್ ಗೌಡ, ಚನ್ನಾರೆಡ್ಡಿ ಪಾಟೀಲ್, ದೇವೇಂದ್ರಪ್ಪ. ಡಿ.ರವಿಶಂಕರ್, ನಯನಾ ಮೋಟಮ್ಮ, ರಾಜಾವೇಣುಗೋಪಾಲ ನಾಯಕ, ಮಹೇಂದ್ರ ತಮ್ಮಣ್ಣನವರ್, ಎ.ಸಿ.ಶ್ರೀನಿವಾಸ, ಅಶೋಕ್ ಮನಗೂಳಿ, ಪಿ.ರವಿಕುಮಾರ್, ಬಾಬಾಸಾಹೇಬ್ ಪಾಟೀಲ್ ಸೇರಿ 31 ಶಾಸಕರು ಪತ್ರ ಬರೆದಿದ್ದಾರೆ.



