ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯ ಹಿನ್ನೆಲೆ, ಕೆಎಸ್ಆರ್ಟಿಸಿ ಸಾರ್ವಜನಿಕರಿಗೆ ವಿಶೇಷ ಅನುಕೂಲ ಕಲ್ಪಿಸಿದೆ. ಹಬ್ಬದ ದಿನಗಳಲ್ಲಿ ಸುಗಮ ಸಂಚಾರ ಒದಗಿಸುವ ಉದ್ದೇಶದಿಂದ ಡಿಸೆಂಬರ್ 22ರಿಂದ 24ರವರೆಗೆ ರಾಜ್ಯದ ವಿವಿಧ ಭಾಗಗಳಿಗೆ ಸುಮಾರು 1,000 ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆ ಮಾಡಲು ಸಾರಿಗೆ ಇಲಾಖೆ ನಿರ್ಧರಿಸಿದೆ. ನಗರದಿಂದ ರಾಜ್ಯದ ಮೂಲೆಮೂಲೆಗೆ ತೆರಳುವ ಪ್ರಯಾಣಿಕರಿಗೆ ಇದರಿಂದ ನೆರವು ಸಿಗಲಿದೆ.
ಇದೇ ವೇಳೆ, ಹಬ್ಬದ ನಂತರದ ಪ್ರಯಾಣದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 26 ಮತ್ತು 28ರಂದು ರಾಜ್ಯ ಹಾಗೂ ಅಂತರರಾಜ್ಯ ಮಾರ್ಗಗಳಲ್ಲೂ ವಿಶೇಷ ಬಸ್ ಸೇವೆ ಒದಗಿಸಲಾಗುವುದು ಎಂದು ಕೆಎಸ್ಆರ್ಟಿಸಿ ತಿಳಿಸಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಸೇರಿದಂತೆ ಹಲವು ಪ್ರಮುಖ ನಗರಗಳು ಮತ್ತು ಪ್ರವಾಸಿ ತಾಣಗಳಿಗೆ ಹೆಚ್ಚುವರಿ ಬಸ್ಗಳು ಸಂಚರಿಸಲಿವೆ.
ಅದೇ ರೀತಿ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು ಮತ್ತು ಕೊಡಗು ಭಾಗಗಳತ್ತ, ಶಾಂತಿನಗರದಿಂದ ತಮಿಳುನಾಡು ಹಾಗೂ ಕೇರಳದ ಪ್ರಮುಖ ನಗರಗಳಿಗೆ ಐಷಾರಾಮಿ ಬಸ್ ಸೇವೆ ಲಭ್ಯವಿರಲಿದೆ. ಪ್ರಯಾಣಿಕರು ಮುಂಗಡ ಆಸನ ಕಾಯ್ದಿರಿಸಲು ಅವಕಾಶವಿದ್ದು, ಅಧಿಕೃತ ವೆಬ್ಸೈಟ್ ಮೂಲಕ ಇ-ಟಿಕೆಟ್ ಬುಕ್ಕಿಂಗ್ ಮಾಡಬಹುದು ಎಂದು ತಿಳಿಸಲಾಗಿದೆ.

