Saturday, October 4, 2025

ಭಾರೀ ಮಳೆ, ಭೂಕುಸಿತಕ್ಕೆ ಒಡಿಶಾ ತತ್ತರ! ಓರ್ವ ಸಾವು, ಇಬ್ಬರು ನಾಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಒಡಿಶಾದಲ್ಲಿ ಭಾರೀ ಮಳೆ ಸುರಿಯುತ್ತಿದೆ. ರಾಜ್ಯದ ಕರಾವಳಿ ಮತ್ತು ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಎರಡು ದಿನಗಳಲ್ಲಿ ಗಜಪತಿ ಜಿಲ್ಲೆಯಲ್ಲಿ ಕೆಲವು ಭೂಕುಸಿತಗಳು ಸಂಭವಿಸಿ ಒಬ್ಬರು ಸಾವನ್ನಪ್ಪಿದ್ದು ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ.

ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಏಳು ಜಿಲ್ಲೆಗಳಿಗೆ ಅತಿ ಹೆಚ್ಚು ಮಳೆಯ ಸಾಧ್ಯತೆ ಇದ್ದು ಆ ಜಿಲ್ಲೆಗಳಿಗೆ ‘ರೆಡ್’ ಅಲರ್ಟ್, 16 ಜಿಲ್ಲೆಗಳಿಗೆ ‘ಆರೆಂಜ್’ ಅಲರ್ಟ್, ಉಳಿದ ಏಳು ಜಿಲ್ಲೆಗಳಿಗೆ ‘ಯೆಲ್ಲೋ’ ಅಲರ್ಟ್ ನೀಡಲಾಗಿದೆ. ಭಾರೀ ಮಳೆಯಿಂದ ಗಜಪತಿಯಲ್ಲಿ ಆರು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದ್ದು, ರಾಯಗಢ ಬ್ಲಾಕ್‌ನ ಪೆಕಟ್ ಪ್ರದೇಶದಲ್ಲಿ 70 ವರ್ಷದ ಕಾರ್ತಿಕ ಶಬರಾ ಮತ್ತು ಅವರ ಮಗ ರಾಜೀಬ್ ಶಬರಾ ನಾಪತ್ತೆಯಾಗಿದ್ದಾರೆ. ಮೃತದೇಹಗಳನ್ನು ಹುಡುಕಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಮಹೇಂದ್ರಗಿರಿ ಬೆಟ್ಟಗಳಲ್ಲಿ ಭೂಕುಸಿತದಲ್ಲಿ ಸಿಲುಕಿದ್ದ 24 ಪ್ರವಾಸಿಗರನ್ನು ರಕ್ಷಿಸಲಾಗಿದೆ. ಜಿಲ್ಲೆ ಉನ್ನತ ಅಧಿಕಾರಿಗಳು ಮತ್ತು ಸಚಿವರು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.