March 15, 2026
Sunday, March 15, 2026
spot_img

ಹೇ ಮೋದಿ ದಿಲ್ ಕೀ ಬಾತ್: ಹೃದಯ ಶಸ್ತ್ರ ಚಿಕಿತ್ಸೆ ಪಡೆದ ಮಕ್ಕಳ ಅತಿದೊಡ್ಡ ಸಮಾವೇಶದಲ್ಲಿ ಪ್ರಧಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದ ನವ ರಾಯ್‌ಪುರದಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಕ್ಕಳ ಅತಿದೊಡ್ಡ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ.

ಉಚಿತವಾಗಿ ಜೀವ ಉಳಿಸುವ ಹೃದಯ ಶಸ್ತ್ರಚಿಕಿತ್ಸೆಗಳನ್ನು ಪಡೆದ ವಿವಿಧ ವಯೋಮಾನದ 2,500 ಮಕ್ಕಳು ಸಂವಾದದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಾವು 2047ರ ವೇಳೆಗೆ ‘ವಿಕಸಿತ ಭಾರತ’ ರೂಪಿಸಬೇಕೆನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಎಲ್ಲ ರಾಜ್ಯಗಳೂ ಆ ದಿಕ್ಕಿನಲ್ಲಿ ಸಾಗುತ್ತಿವೆ. ನಮ್ಮ ಭವಿಷ್ಯ ಎನಿಸಿರುವ ನಮ್ಮ ಯುವ ಪೀಳಿಗೆ ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ನವ ರಾಯ್‌ಪುರದ ಶ್ರೀ ಸತ್ಯ ಸಾಯಿ ಸಂಜೀವನಿ ಮಕ್ಕಳ ಹೃದಯ ಆರೈಕೆ ಕೇಂದ್ರವು, ‘ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನ’ ದ ಅತಿದೊಡ್ಡ ಮಕ್ಕಳ ಹೃದಯ ಆರೈಕೆ ಆಸ್ಪತ್ರೆಗಳ ಸರಪಳಿಯ ಭಾಗವಾಗಿದೆ. ಹುಟ್ಟಿನಿಂದಲೇ ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸುಧಾರಿತ ಮತ್ತು ವಿಶ್ವ ದರ್ಜೆಯ ಹೃದಯ ಆರೈಕೆಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಎಲ್ಲರಿಗೂ ಉಚಿತ ಚಿಕಿತ್ಸಾ ಸೇವೆಯು, ವಿಶ್ವ ದರ್ಜೆಯ ಮತ್ತು ಸಮಾನ ಹೃದಯ ಆರೈಕೆಯ ಕಡೆಗೆ ‘ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನ’ದ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಈ ಮಿಷನ್ ಇಲ್ಲಿಯವರೆಗೆ ಭಾರತ ಮತ್ತು ಅದರಾಚೆಗೆ ಜನ್ಮಜಾತ ಹೃದಯ ಸಮಸ್ಯೆಗಳನ್ನು ಹೊಂದಿರುವ 37,000ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡಿದೆ. ಇದಕ್ಕೆ ಯಾವುದೇ ಮಿತಿಗಳು ಇಲ್ಲವಾಗಿದ್ದು, ಸಹಾನುಭೂತಿಯ ಶಕ್ತಿಯನ್ನು ನೆನಪಿಸುತ್ತದೆ.‌

‘ವಸುಧೈವ ಕುಟುಂಬಕಂ’ ಆಶಯದ ಭಾಗವಾಗಿರುವ ಆರೋಗ್ಯ ರಕ್ಷಣೆಯು ಒಂದು ಸವಲತ್ತು ಅಲ್ಲ, ಹಕ್ಕು ಎಂಬ ಆದರ್ಶವನ್ನು ನಿಜವಾಗಿಯೂ ಪ್ರತಿಧ್ವನಿಸುವ ಒಂದು ಮೈಲಿಗಲ್ಲನ್ನು ಸಂಭ್ರಮಿಸುವ ಈ ಕಾರ್ಯಕ್ರಮದಲ್ಲಿ ಸೇವಾ ಅಭಿಯಾನದ ಖ್ಯಾತ ಪೋಷಕರಾದ ಡಾ. ಸಿ. ಶ್ರೀನಿವಾಸ್, ಮಾಜಿ ಕ್ರಿಕೆಟ್ ಆಟಗಾರ ಸುನಿಲ್ ಗವಾಸ್ಕರ್, ಹಿರಿಯರಾದ ವಿವೇಕ್ ನಾರಾಯಣ್ ಗೌರ್, ಬಿ.ಎನ್. ನರಸಿಂಹಮೂರ್ತಿ ಹಾಗೂ ವಿ. ಕೃಷ್ಣನ್ ಪಾಲ್ಗೊಂಡಿದ್ದರು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !