Tuesday, October 21, 2025

ಪ್ರಾಮಾಣಿಕತೆಯೇ ನಿಜವಾದ ಸಂಪತ್ತು! ವೃದ್ಧನ ಪಾಲಿಗೆ ದೇವರಾದ ಕಂಡಕ್ಟರ್-ಡ್ರೈವರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾರ್ವಜನಿಕ ಸಾರಿಗೆ ಬಸ್‌ನಲ್ಲಿ ಬಿಟ್ಟುಹೋಗಿದ್ದ ₹1.60 ಲಕ್ಷ ಹಣದ ಬ್ಯಾಗನ್ನು ಪ್ರಯಾಣಿಕನಿಗೆ ಮರಳಿಸುವ ಮೂಲಕ ಕರ್ತವ್ಯ ನಿರತ ಕಂಡಕ್ಟರ್ ಮತ್ತು ಚಾಲಕರು ಬೀದರ್ ಜಿಲ್ಲೆಯಲ್ಲಿ ಅಪರೂಪದ ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ಮೆರೆದಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಭಾಟಸಾಂಗ್ವಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಬಸ್‌ನಲ್ಲೇ ತಮ್ಮ ಹಣದ ಚೀಲವನ್ನು ಮರೆತು ಹೋಗಿದ್ದ ವಯೋವೃದ್ಧ ಪ್ರಯಾಣಿಕರೊಬ್ಬರು ಆತಂಕದಲ್ಲಿದ್ದರು. ಈ ವಿಷಯ ತಿಳಿದ ಕೂಡಲೇ, ಕರ್ತವ್ಯ ನಿರತ ಸಾರಿಗೆ ಬಸ್‌ನ ನಿರ್ವಾಹಕರಾದ ಸಿದ್ರಾಮ್ ಮತ್ತು ಚಾಲಕರಾದ ಹನೀಪ್ ಅವರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.

ಯಾವುದೇ ವಿಳಂಬ ಮಾಡದೆ, ಸಿಬ್ಬಂದಿ ನೇರವಾಗಿ ವೃದ್ಧರ ಗ್ರಾಮಕ್ಕೆ ತೆರಳಿ, ಭದ್ರವಾಗಿದ್ದ ₹1.60 ಲಕ್ಷ ನಗದಿದ್ದ ಚೀಲವನ್ನು ವಯೋವೃದ್ಧರಿಗೆ ಹಿಂತಿರುಗಿಸಿದ್ದಾರೆ. ಸಾರಿಗೆ ನೌಕರರ ಈ ಅತ್ಯುತ್ತಮ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯುತ ನಡೆಯನ್ನು ಜಿಲ್ಲೆಯ ಜನರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಮೂಲಕ, ಸರ್ಕಾರಿ ನೌಕರರ ಕಾರ್ಯದಕ್ಷತೆ ಮತ್ತು ಮಾನವೀಯ ಮೌಲ್ಯಗಳ ಹೊಸ ಅಧ್ಯಾಯಕ್ಕೆ ಬೀದರ್ ಸಾಕ್ಷಿಯಾಗಿದೆ.

error: Content is protected !!