ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ‘ಮ್ಯಾನ್ ಆಫ್ ಮಾಸಸ್’ ಜ್ಯೂ. ಎನ್ಟಿಆರ್ ಅವರ ಜನಪ್ರಿಯತೆ ಸಾಬೀತಾಗಿದೆ. ಮಹದೇವಪುರದಲ್ಲಿ ನೂತನವಾಗಿ ನಿರ್ಮಿಸಲಾದ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆಗೆ ಆಗಮಿಸಿದ್ದ ನಟನನ್ನು ನೋಡಲು ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು.
ಆಸ್ಪತ್ರೆಯ ಆವರಣಕ್ಕೆ ಜ್ಯೂ. ಎನ್ಟಿಆರ್ ಪ್ರವೇಶಿಸುತ್ತಿದ್ದಂತೆಯೇ, ಹೊರಗೆ ಕಾಯುತ್ತಿದ್ದ ಸಾವಿರಾರು ಅಭಿಮಾನಿಗಳು ಏಕಾಏಕಿ ಆಸ್ಪತ್ರೆಯ ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಉಂಟಾದ ಭೀಕರ ನೂಕುನುಗ್ಗಲಿನಿಂದಾಗಿ ಆಸ್ಪತ್ರೆಯ ಎಸ್ಕಲೇಟರ್ ಕೂಡ ಮುರಿದು ಬಿದ್ದಿದೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು, ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಅನಾಹುತಗಳನ್ನು ತಪ್ಪಿಸಲು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ ನಡೆಸಿದರು.
ತಮ್ಮ ನೆಚ್ಚಿನ ನಟನ ಒಂದು ನೋಟ ಪಡೆಯಲು ಅಭಿಮಾನಿಗಳು ಹರಸಾಹಸ ಪಟ್ಟಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಂತಿಮವಾಗಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು, ನಟ ಎನ್ಟಿಆರ್ ಅವರು ಸುಗಮವಾಗಿ ಕಾರ್ಯಕ್ರಮ ಮುಗಿಸಿ ತೆರಳಲು ವ್ಯವಸ್ಥೆ ಮಾಡಿದರು.



