ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರಿನ ಹುಳಿಯಾರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಅನುಮಾನಸ್ಪದ ಸಾವಿನ ಕುರಿತು ಸಿಐಡಿ ತನಿಖೆಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಶುಕ್ರವಾರ ಆದೇಶಿಸಿದ್ದಾರೆ.
ಜೂಜಾಟ ಕೇಸ್ ಸಂಬಂಧ ವಿಚಾರಣೆಗೆ ಎಂದು ಪೊಲೀಸರು ಕರೆತಂದಿದ್ದ ಆರು ಮಂದಿಯ ಪೈಕಿ ಕಾಂತರಾಜು ಎಂಬವರು ಮೃತಪಟ್ಟಿದ್ದಾರೆ.
ಇದರ ಬೆನ್ನಲ್ಲೇ ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ವಿಚಾರಣೆ ನೆಪದಲ್ಲಿ ಹಲ್ಲೆ ನಡೆಸಿ ಕೊಲೆಗೈಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಸರ್ಕಾರ ಸಿಐಡಿಗೆ ಹೆಗಲಿಗೆ ತನಿಖೆಯ ಹೊಣೆ ನೀಡಿದೆ.
ಈ ಕುರಿತು ಮಾತನಾಡಿದ ಪರಮೇಶ್ವರ, ವಿಚಾರಣೆಯ ಸಮಯದಲ್ಲಿ ಸಾವು ಸಂಭವಿಸಿದ್ದು, ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ವಿಶೇಷವಾಗಿ ಸಿಐಡಿ ತನಿಖೆಗೆ ಆದೇಶಿಸಿದ್ದೇನೆ. ಸಿಐಡಿ ತನಿಖೆ ನಡೆಸಿ ವರದಿ ಸಲ್ಲಿಸಲಿದ್ದು, ಅದರ ಬಳಿಕ ಸ್ಪಷ್ಟ ಕಾರಣ ತಿಳಿಯಲಿದೆ. ಒಂದು ವೇಳೆ ಹಲ್ಲೆ ನಡೆದಿದೆ ಎಂದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.



