ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಯಾವುದೇ ಮೂಲೆಯಲ್ಲಾಗಲಿ, ಭಯೋತ್ಪಾದನೆಯನ್ನು ಯಾವುದೇ ರೂಪದಲ್ಲಿ ಸಹಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಈ ವ್ಯವಸ್ಥೆಗೆ ಜಗತ್ತಿನಲ್ಲಿ ಸ್ಥಾನವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಲವಾಗಿ ಪ್ರತಿಪಾದಿಸಿದ್ದಾರೆ.
ಇಸ್ರೇಲ್ ಮತ್ತು ಗಾಜಾ ನಡುವಿನ ಸಂಘರ್ಷದ ಕುರಿತು ಮಾತನಾಡಿರುವ ಅವರು, “ಮಾನವೀಯತೆಯು ಎಂದಿಗೂ ಯುದ್ಧ ಮತ್ತು ಸಂಘರ್ಷಕ್ಕೆ ಬಲಿಪಶುವಾಗಬಾರದು” ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಗಾಜಾ ಶಾಂತಿ ಯೋಜನೆಯು ಶಾಂತಿಯತ್ತ ಹೊಸ ಭರವಸೆಯನ್ನು ಮೂಡಿಸಿದ್ದು, ಭಾರತವು ಈ ಪ್ರಯತ್ನಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಭಯೋತ್ಪಾದನೆ ಮತ್ತು ಅದನ್ನು ಪೋಷಿಸುವ ಶಕ್ತಿಗಳ ವಿರುದ್ಧ ಹೋರಾಡಲು ಭಾರತವು ಇಸ್ರೇಲ್ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ.
ಗಾಜಾದಲ್ಲಿ ಶಾಂತಿ ನೆಲೆಸಲು ಸಮಾಲೋಚನೆ ಮತ್ತು ಸಹಕಾರವೇ ಏಕೈಕ ಮಾರ್ಗ. ಭಾರತವು ಈ ನಿಟ್ಟಿನಲ್ಲಿ ಜಾಗತಿಕ ರಾಷ್ಟ್ರಗಳೊಂದಿಗೆ ನಿರಂತರ ಸಂವಾದವನ್ನು ಮುಂದುವರಿಸಲಿದೆ. ಸಂಘರ್ಷದ ಸಂದರ್ಭದಲ್ಲಿ ಸಾಮಾನ್ಯ ಜನರ ಹಿತಾಸಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ರಕ್ಷಿಸುವುದು ಪ್ರತಿಯೊಂದು ದೇಶದ ಕರ್ತವ್ಯವಾಗಿದೆ.
ಜಾಗತಿಕ ಶಾಂತಿ ಮತ್ತು ಸ್ಥಿರತೆಯ ದೃಷ್ಟಿಯಿಂದ ಭಾರತವು ತನ್ನ ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸಲಿದ್ದು, ಅಹಿಂಸೆ ಮತ್ತು ಮಾತುಕತೆಯ ಮೂಲಕವೇ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಲು ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.



