Wednesday, October 22, 2025

ನಾನುಂಟು, ಆ ನನ್ನ ತಾಯಿಯುಂಟು, ಆಕೆಯ ಭಕ್ತರುಂಟು! ಹಾಸನಾಂಬೆ ಮುಂದೆ ಡಿಕೆಶಿ ಪ್ರಾರ್ಥನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ಸಚಿವ ಸಂಪುಟ ಪುನಾರಚನೆ, ನವೆಂಬರ್ ನಲ್ಲಿ ರಾಜಕೀಯದಲ್ಲಿ ಕ್ರಾಂತಿಯಾಗುತ್ತದೆ ಎಂಬ ಮಾತುಗಳ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪತ್ನಿ ಜೊತೆಗೂಡಿ ನಿನ್ನೆ ಮಂಗಳವಾರ ರಾತ್ರಿ ವರ್ಷಕ್ಕೊಮ್ಮೆ ದರುಶನ ನೀಡುವ ತಾಯಿ ಹಾಸನಾಂಬೆಯನ್ನು ಭಕ್ತಿಯಿಂದ ಕಣ್ತುಂಬಿಸಿಕೊಂಡಿದ್ದಾರೆ.

ಸಿಎಂ ರೇಸ್‌ನಲ್ಲಿರುವ ಡಿಕೆ ಶಿವಕುಮಾರ್ ಪತ್ನಿ ಉಷಾ ಅವರ ಜೊತೆ ಹಾಸನಾಂಬೆ ದೇವಿಯ ಗರ್ಭಗುಡಿಯಲ್ಲಿ ಸುಮಾರು 15 ನಿಮಿಷ ಆಸೀನರಾಗಿ ವಿಶೇಷ ಪೂಜೆ ಸಲ್ಲಿಸಿದರು. ಶಕ್ತಿಯುತವಾದ ನಾರಾಯಣಿ ನಮಸ್ಕಾರ ಮಂತ್ರ ಮತ್ತು ಖಡ್ಗಮಾಲಾ ಸ್ತ್ರೋತ್ರ ಪಠಿಸಿದರು. ನಾರಾಯಣಿ ನಮಸ್ಕಾರ ಮಂತ್ರ ದುರ್ಗಾ ಸಪ್ತಷತಿಯ 11ನೇ ಅಧ್ಯಾಯದಲ್ಲಿ ಬರುವ ಮಂತ್ರವಾಗಿದೆ. ಇದು ಅತ್ಯಂತ ಪ್ರಬಲ ಪೂಜೆಯಾಗಿದ್ದು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಚಂಡಿಕಾ ಹೋಮ ಮಾಡುವ ವೇಳೆ ಪಠಿಸುವ ಮಂತ್ರವಾಗಿದೆ. ಸುಮಾರು 5 ನಿಮಿಷಗಳ ಕಾಲ ಡಿಕೆಶಿ ಖಡ್ಗಮಾಲಾ ಸ್ತ್ರೋತ್ರವನ್ನು ಪಠಿಸಿದ್ದಾರೆ.

ನೀವು ಹೆಚ್ಚಿನ ಅಧಿಕಾರ ಸಿಗಲು ಬೇಡಿಕೊಂಡಿರಾ ಎಂಬ ಪ್ರಶ್ನೆಗೆ ಮೊದಲಿಗೆ, ನಿಮಗೆ-ನಮಗೆ ಎಲ್ಲರಿಗೂ ಕೂಡ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದರು. ಬಳಿಕ ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವಂತಹ ಸ್ಥಳ ದೇವಾಲಯ. ನಾನುಂಟು ಆ ತಾಯಿ ಉಂಟು. ನಾನುಂಟು ಭಕ್ತರುಂಟು ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

error: Content is protected !!