ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಳ್ಳೋಗಾಲದಲ್ಲಿ ಮದುವೆ ಮಂಟಪಕ್ಕೆ ಬರುತ್ತಿದ್ದ ವರನಿಗೆ ಚಾಕು ಇರಿತವಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ವರನಿಗೆ ಚಾಕು ಇರಿಸಿದ್ದು ಬೇರಾರೂ ಅಲ್ಲ, ಮದುವೆಯಾಗಬೇಕಿದ್ದ ವಧುವೇ ಎಂದು ತಿಳಿದುಬಂದಿದೆ.
ಡಿ.30ರಂದು ಕುಣಗಳ್ಳಿ ಗ್ರಾಮದ ರವೀಶ್ ಮತ್ತು ನಯನ ಮದುವೆ ನಡೆಯಬೇಕಿತ್ತು. ರವೀಶ್ ಹೊಸ ಜೀವನಕ್ಕೆ ಕಾಲಿಡುವ ಸಂತೋಷದಲ್ಲಿದ್ದರು. ಹಿಂದಿನ ದಿನ ರಿಸೆಪ್ಶನ್ಗೆ ರವೀಶ್ ಸೇರಿದಂತೆ ಸಂಬಂಧಿಕರು ಕಲ್ಯಾಣ ಮಂಟಪದತ್ತ ಹೊರಟಿದ್ದರು.
ಕೊಳ್ಳೇಗಾಲದ ವೆಂಕಟೇಶ್ವರ ಮಂಟಪಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಮತ್ತೊಂದು ಕಾರಿನಲ್ಲಿ ಬಂದ ಗುಂಪು ರವೀಶ್ ಕಾರನ್ನು ಅಡ್ಡಗಟ್ಟಿ ಗಲಾಟೆ ತೆಗೆದು ಚಾಕು ಇರಿದು ಪರಾರಿಯಾಗಿತ್ತು. ಗಾಯಗೊಂಡಿದ್ದ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದರು.
ನಂತರ ಪೊಲೀಸರು ತನಿಖೆ ನಡೆಸಿದ್ದಾರೆ. ವಧು ನಯನ ಕಾಲ್ ರೆಕಾರ್ಡ್ ಚೆಕ್ ಮಾಡಿದಾಗ ಇದರ ಹಿಂದೆ ಆಕೆ ಕೈವಾಡ ಇರುವುದು ಗೊತ್ತಾಗಿದೆ. ಈಕೆಗೆ ಮದುವೆ ಇಷ್ಟವಿರಲಿಲ್ಲ. ಅದೇ ಊರಿನ ದರ್ಶನ್ ಎನ್ನುವಾತನನ್ನು ಈಕೆ ಪ್ರೀತಿಸುತ್ತಿದ್ದಳು. ಪುಸ್ತಕ ಮಾರಿಕೊಂಡು, ತಮಟೆ ಬಾರಿಸಿಕೊಂಡು ಜೀವನ ನಡೆಸುತ್ತಿದ್ದ ದರ್ಶನ್ ಜತೆ ಮದುವೆ ಮಾಡಿಕೊಡಲು ಮನೆಯವರು ನಿರಾಕರಿಸಿದ್ದರು.
ಇಷ್ಟವಿಲ್ಲದೆ ರವೀಶ್ ಜತೆ ಮದುವೆಗೆ ತಯಾರಿ ನಡೆಸಿದ್ದರು. ನಯನ ತನ್ನ ತಂಗಿಯ ಫೋನ್ನಿಂದ ದರ್ಶನ್ಗೆ ಕರೆ ಮಾಡಿ ರವೀಶ್ನನ್ನು ಕೊಲ್ಲು ಎಂದು ಹೇಳಿದ್ದಳು. ಇದೀಗ ನಯನ ಹಾಗೂ ದರ್ಶನ್ ಪೊಲೀಸ್ ವಶದಲ್ಲಿದ್ದು, ವಿಚಾರಣೆ ಮುಂದುವರಿದಿದೆ.



