ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತಿದ್ದ ಟೀಂ ಇಂಡಿಯಾಗೆ ಸರಣಿಯ ಮಧ್ಯದಲ್ಲೇ ಅಘಾತ ಎದುರಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಸ್ಟಾರ್ ಆಲ್ರೌಂಡರ್ ಅಕ್ಷರ್ ಪಟೇಲ್ ಉಳಿದ ಎರಡು ಟಿ20 ಪಂದ್ಯಗಳಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ.
ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಮೂರು ಪಂದ್ಯಗಳು ಮುಗಿದಿದ್ದು, ಲಕ್ನೋ ಮತ್ತು ಅಹಮದಾಬಾದ್ನಲ್ಲಿ ನಡೆಯಲಿರುವ ಕೊನೆಯ ಎರಡು ಪಂದ್ಯಗಳಿಗೆ ಅಕ್ಷರ್ ಲಭ್ಯರಿರುವುದಿಲ್ಲ.
ಧರ್ಮಶಾಲಾದಲ್ಲಿ ನಡೆದ ಮೂರನೇ ಟಿ20 ಪಂದ್ಯಕ್ಕೂ ಮುನ್ನವೇ ಅಕ್ಷರ್ ಅಸ್ವಸ್ಥರಾಗಿದ್ದು, ಆ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿಲ್ಲ. ಶೀತ ವಾತಾವರಣ ಮತ್ತು ನಿರಂತರ ಪ್ರಯಾಣದ ಪರಿಣಾಮ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುವ ಅಕ್ಷರ್ಗೆ ವಿಶ್ರಾಂತಿ ಅತ್ಯಾವಶ್ಯಕವಾಗಿರುವುದರಿಂದ ಉಳಿದ ಪಂದ್ಯಗಳಿಂದ ದೂರವಿಡಲಾಗಿದೆ.
ಈ ಸರಣಿಯ ಆರಂಭಿಕ ಪಂದ್ಯಗಳಲ್ಲಿ ಅಕ್ಷರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದರು. ಅವರ ಅನುಪಸ್ಥಿತಿಯಲ್ಲಿ ಸ್ಪಿನ್ ವಿಭಾಗದ ಹೊಣೆಗಾರಿಕೆ ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ಮೇಲಿದೆ. ಅಕ್ಷರ್ ಬದಲಿಗೆ ಶಹಬಾಜ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಸರಣಿಯ ನಿರ್ಣಾಯಕ ಹಂತದಲ್ಲಿ ಈ ಬದಲಾವಣೆ ಟೀಂ ಇಂಡಿಯಾ ಸಮತೋಲನಕ್ಕೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ಕಾದು ನೋಡಬೇಕಿದೆ.

