January21, 2026
Wednesday, January 21, 2026
spot_img

ತಾಲಿಬಾನ್ ದಾಳಿಗೆ ಭಾರತ ಕಾರಣವಂತೆ: ಶಹಬಾಜ್ ಷರೀಫ್ ಹೊಸ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದೊಂದಿಗೆ ನಡೆಯುತ್ತಿರುವ ಕದನದಲ್ಲಿ ಹಲವಾರು ಸೈನಿಕರನ್ನು ಕಳೆದುಕೊಂಡ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಇದೀಗ ಹೊಸ ಆರೋಪ ಮಾಡಿದ್ದಾರೆ. ಅಫ್ಘಾನಿಸ್ತಾನವು ಭಾರತದ ಆಜ್ಞೆಯ ಮೇರೆ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ. ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾರತದಲ್ಲಿದ್ದ ಸಮಯದಲ್ಲೇ ದಾಳಿ ನಡೆದಿರುವುದನ್ನು ಉಲ್ಲೇಖಿಸಿ, ಇದೊಂದು “ಭಾರತದ ನೇರ ಹಸ್ತಕ್ಷೇಪದ ಫಲ” ಎಂದು ಶಹಬಾಜ್ ಹೇಳಿದ್ದಾರೆ.

ಇದೇ ವೇಳೆ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನವು ಈಗ ಎರಡು ಮುಂಭಾಗದ ಯುದ್ಧಕ್ಕೆ ಅಂದರೆ ಭಾರತ ಮತ್ತು ಅಫ್ಘಾನಿಸ್ತಾನದ ವಿರುದ್ಧ — ಸಿದ್ಧತೆ ನಡೆಸುತ್ತಿದೆ ಎಂದು ಅವರು ಘೋಷಿಸಿದ್ದಾರೆ. ಭಾರತ ಯಾವಾಗ ಬೇಕಾದರೂ ಹೊಸ ಯುದ್ಧ ಆರಂಭಿಸಬಹುದು ಎಂದು ಹೇಳಿದ ಖವಾಜಾ ಆಸಿಫ್, ಪಾಕಿಸ್ತಾನ ಅದಕ್ಕಾಗಿ ಪೂರ್ಣ ಸಜ್ಜಾಗಿದೆ ಎಂದು ಘೋಷಿಸಿದ್ದಾರೆ.

ಇತ್ತೀಚಿನ ಅಫ್ಘಾನ್-ಪಾಕ್ ಸಂಘರ್ಷವು ಕಳೆದ ಕೆಲವು ವರ್ಷಗಳಲ್ಲೇ ಅತ್ಯಂತ ರಕ್ತಸಿಕ್ತ ಕದನವಾಗಿ ಪರಿಣಮಿಸಿದೆ. ಕಾಬೂಲ್, ಕಂದಹಾರ್, ನಂಗರ್‌ಹಾರ್ ಮತ್ತು ಹೆಲ್ಮಂಡ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪಾಕಿಸ್ತಾನ ವಾಯುದಾಳಿಗಳನ್ನು ನಡೆಸಿದ್ದು, 20 ಕ್ಕೂ ಹೆಚ್ಚು ಸ್ಥಳಗಳಲ್ಲಿ ನಾಗರಿಕ ಆಸ್ತಿಪಾಸ್ತಿಗೆ ಭಾರೀ ಹಾನಿಯಾಗಿದೆ. ತಾಲಿಬಾನ್ ಮೂಲಗಳ ಪ್ರಕಾರ, ಈ ದಾಳಿಯಲ್ಲಿ ಕನಿಷ್ಠ 12 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಎರಡೂ ರಾಷ್ಟ್ರಗಳ ನಡುವಿನ ಗಡಿಭಾಗದ ಕಂದಹಾರ್‌ನ ‘ಸ್ನೇಹ ದ್ವಾರ’ ಕುಸಿದಿದೆ. ತಾತ್ಕಾಲಿಕ ಕದನ ವಿರಾಮ ಘೋಷಣೆಗೊಂಡಿದ್ದರೂ, ಉದ್ವಿಗ್ನತೆ ಇನ್ನೂ ಕಡಿಮೆಯಾಗಿಲ್ಲ. “ಈ ವಿರಾಮ ಕೇವಲ ಸಮಯ ಕೊಲ್ಲುವುದಕ್ಕಾಗಿದ್ದರೆ, ನಾವು ಅದನ್ನು ಸ್ವೀಕರಿಸುವುದಿಲ್ಲ” ಎಂದು ಅಫ್ಘಾನಿಸ್ತಾನದ ಪ್ರತಿನಿಧಿಗಳು ಎಚ್ಚರಿಕೆ ನೀಡಿದ್ದಾರೆ.

Must Read