January20, 2026
Tuesday, January 20, 2026
spot_img

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಅಣಕಿಸಿದ ಭಾರತ: ಕಾಶ್ಮೀರದ ಕುರಿತು ನಿಲುವು ಪುನರುಚ್ಚರಿಸಿದ ರಾಯಭಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ “ಶಾಂತಿಗಾಗಿ ನಾಯಕತ್ವ” ಕುರಿತ ಮುಕ್ತ ಚರ್ಚೆ, ಭಾರತ–ಪಾಕಿಸ್ತಾನ ನಡುವಿನ ದೀರ್ಘಕಾಲದ ಭಿನ್ನಾಭಿಪ್ರಾಯಗಳನ್ನು ಮತ್ತೊಮ್ಮೆ ಜಾಗತಿಕ ವೇದಿಕೆಗೆ ತಂದಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನಿ ಪ್ರತಿನಿಧಿಯ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಭಾರತ, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ತನ್ನ ನಿಲುವನ್ನು ಸ್ಪಷ್ಟವಾಗಿ ಮಂಡಿಸಿದೆ.

ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಹರೀಶ್ ಪಿ., ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿವೆ ಎಂದು ಖಡಕ್ ಆಗಿ ಹೇಳಿದರು. ಈ ಪ್ರದೇಶಗಳು ಇತಿಹಾಸದಲ್ಲಿಯೂ ಭಾರತದ ಭಾಗವಾಗಿದ್ದವು, ಇಂದೂ ಭಾರತದ ಭಾಗವಾಗಿವೆ ಮತ್ತು ಮುಂದೆಯೂ ಹಾಗೆಯೇ ಇರುತ್ತವೆ ಎಂದು ಅವರು ನಿಸ್ಸಂದಿಗ್ಧವಾಗಿ ಘೋಷಿಸಿದರು.

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಚಾರವನ್ನು ಪದೇ ಪದೇ ಎತ್ತುವ ಮೂಲಕ ಪಾಕಿಸ್ತಾನ ತನ್ನ ಭಾರತ ವಿರೋಧಿ ಅಜೆಂಡಾವನ್ನು ಮುಂದುವರಿಸುತ್ತಿದೆ ಎಂದು ಭಾರತ ಆರೋಪಿಸಿತು.

ಭಯೋತ್ಪಾದನೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಭಾರತ ಪುನರುಚ್ಚರಿಸಿದೆ. ಕಳೆದ ಹಲವು ದಶಕಗಳಿಂದ ಪಾಕಿಸ್ತಾನ ಪ್ರಾಯೋಜಿತ ಉಗ್ರವಾದದಿಂದ ಸಾವಿರಾರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಯಭಾರಿ ಹರೀಶ್ ಪಿ. ಹೇಳಿದರು. ಸಿಂಧೂ ಜಲ ಒಪ್ಪಂದವನ್ನು ಭಾರತ ಸದ್ಭಾವನೆಯಿಂದ ಒಪ್ಪಿಕೊಂಡಿದ್ದರೂ, ಪಾಕಿಸ್ತಾನ ಅದನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪವೂ ಕೇಳಿಬಂದಿತು.

ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆ ವಿಷಯಗಳಲ್ಲಿ ಭಾರತದ ನಿಲುವು ದೃಢವಾಗಿದ್ದು, ಜಾಗತಿಕ ಮಟ್ಟದಲ್ಲಿಯೂ ಅದನ್ನು ಬಲವಾಗಿ ಪ್ರತಿಪಾದಿಸುವುದಾಗಿ ಭಾರತ ಸ್ಪಷ್ಟಪಡಿಸಿದೆ.

Must Read