Saturday, November 22, 2025

ಬಾಂಗ್ಲಾಕ್ಕೆ ಹಸೀನಾ ಹಸ್ತಾಂತರಕ್ಕೆ ಇಂಟರ್‌ಪೋಲ್ ಮೊರೆ; ಭಾರತಕ್ಕೆ ಕಠಿಣ ಸವಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನಾಕಾರರ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಗಡಿಪಾರಿಗೆ ಸಂಬಂಧಿಸಿದಂತೆ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಇದೀಗ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆ ಇಂಟರ್‌ಪೋಲ್ ನೆರವು ಪಡೆಯಲು ನಿರ್ಧರಿಸಿದೆ. ಈ ಬೆಳವಣಿಗೆಯಿಂದಾಗಿ ಭಾರತ ಸರ್ಕಾರವು ರಾಜತಾಂತ್ರಿಕ ಮತ್ತು ಕಾನೂನಾತ್ಮಕವಾಗಿ ಮತ್ತೊಂದು ದೊಡ್ಡ ಸವಾಲನ್ನು ಎದುರಿಸುವಂತಾಗಿದೆ.

ಶೇಖ್ ಹಸೀನಾ ಮತ್ತು ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಲ್ ಅವರಿಗೆ ಇತ್ತೀಚೆಗೆ ಬಾಂಗ್ಲಾದೇಶದ ನ್ಯಾಯಾಲಯವು ಮರಣದಂಡನೆ ವಿಧಿಸಿದ ನಂತರ, ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಹಸ್ತಾಂತರ ಒಪ್ಪಂದವನ್ನು ಉಲ್ಲೇಖಿಸಿ ಅವರನ್ನು ಮರಳಿ ಒಪ್ಪಿಸುವಂತೆ ಭಾರತದ ಮೇಲೆ ಒತ್ತಡ ಹೇರಿತ್ತು. ಆಗಸ್ಟ್ 5, 2024 ರಂದು ಬೃಹತ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ದೇಶ ತೊರೆದು ದೆಹಲಿಯಲ್ಲಿ ವಾಸಿಸುತ್ತಿರುವ ಹಸೀನಾ ಅವರ ಕುರಿತು ಭಾರತ ಯಾವುದೇ ನಿರ್ಧಾರ ಪ್ರಕಟಿಸದ ಹಿನ್ನೆಲೆಯಲ್ಲಿ, ಪ್ರೊಫೆಸರ್ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಈ ಕಠಿಣ ಹೆಜ್ಜೆ ಇಟ್ಟಿದೆ.

ಮರಣದಂಡನೆಯ ಕುರಿತು ಶೇಖ್ ಹಸೀನಾ ಅವರ ಪಕ್ಷವಾದ ಅವಾಮಿ ಲೀಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ತೀರ್ಪು “ಯಾವುದೇ ಪ್ರಜಾಪ್ರಭುತ್ವದ ಆದೇಶವಿಲ್ಲದ ಚುನಾಯಿತ ಸರ್ಕಾರವು ಸ್ಥಾಪಿಸಿದ ನ್ಯಾಯಮಂಡಳಿಯಿಂದ ನೀಡಲ್ಪಟ್ಟಿದ್ದು. ಇದು ರಾಜಕೀಯಪ್ರೇರಿತ” ಎಂದು ಪಕ್ಷವು ಖಂಡಿಸಿದೆ.

ಇಂಟರ್‌ಪೋಲ್ ವಿಶ್ವದ ಅತಿದೊಡ್ಡ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆಯಾಗಿದ್ದು, ಅಪರಾಧ ನಿಯಂತ್ರಣ ಮತ್ತು ಸಹಕಾರವನ್ನು ಸುಗಮಗೊಳಿಸುತ್ತದೆ. ಶೇಖ್ ಹಸೀನಾ ಅವರನ್ನು ಭಾರತವು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಲು ನಿರಾಕರಿಸಿದರೆ, ಅದು ಇಂಟರ್‌ಪೋಲ್ ತನಿಖೆಯನ್ನು ಎದುರಿಸಬೇಕಾಗುತ್ತದೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತ, “ಶೇಖ್ ಹಸೀನಾಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ತೀರ್ಪನ್ನು ಗಮನಿಸಿದ್ದೇವೆ. ಬಾಂಗ್ಲಾದೇಶದ ಜನರ ಹಿತಾಸಕ್ತಿಗಳಿಗೆ ಭಾರತ ಬದ್ಧವಾಗಿದೆ” ಎಂದು ಹೇಳಿದೆ. ಆದರೆ, ಹಸ್ತಾಂತರದ ಬಗ್ಗೆ ಸ್ಪಷ್ಟ ನಿಲುವನ್ನು ಇದುವರೆಗೆ ಪ್ರಕಟಿಸಿಲ್ಲ. ಬಾಂಗ್ಲಾದೇಶ ಇಂಟರ್‌ಪೋಲ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿರುವ ಕಾರಣ, ಶೇಖ್ ಹಸೀನಾ ಅವರ ಭವಿಷ್ಯ ಮತ್ತು ಭಾರತದ ರಾಜತಾಂತ್ರಿಕ ಸಂಬಂಧಗಳು ಇದೀಗ ಅತಂತ್ರ ಸ್ಥಿತಿಯಲ್ಲಿವೆ.

error: Content is protected !!