ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026 ಸೀಸನ್ ಆರಂಭಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ.
ತಂಡದ ಪ್ರಮುಖ ವೇಗದ ಬೌಲರ್ ಹರ್ಷಿತ್ ರಾಣಾ ಗಾಯದ ಸಮಸ್ಯೆಯಿಂದ ಈ ಬಾರಿ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲವೆಂದು ತಿಳಿದುಬಂದಿದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆ ಅವರನ್ನು 19ನೇ ಆವೃತ್ತಿಯಿಂದ ಹೊರಗಿಡಲು ನಿರ್ಧಾರ ಕೈಗೊಳ್ಳಲಾಗಿದೆ.
ಟಿ20 ವಿಶ್ವಕಪ್ 2026 ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೌಲಿಂಗ್ ಮಾಡುವ ವೇಳೆ ರಾಣಾ ಗಾಯಗೊಂಡಿದ್ದರು. ಈ ಗಾಯದ ಪರಿಣಾಮವಾಗಿ ಅವರು ವಿಶ್ವಕಪ್ ಟೂರ್ನಿಯಿಂದಲೂ ಹೊರಗುಳಿಯಬೇಕಾಯಿತು. ಬಳಿಕ ಅವರಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಸಂಪೂರ್ಣವಾಗಿ ಫಿಟ್ ಆಗಲು ಇನ್ನೂ ಸಮಯ ಬೇಕಾಗಿದೆ.
ಇದನ್ನೂ ಓದಿ:
ಐಪಿಎಲ್ನಿಂದ ಹೊರಗುಳಿದರೂ ರಾಣಾಗೆ ಅವರ ಪೂರ್ಣ ಸಂಬಳ ಲಭ್ಯವಾಗಲಿದೆ. ಬಿಸಿಸಿಐ ನಿಯಮದ ಪ್ರಕಾರ ಕೇಂದ್ರೀಯ ಒಪ್ಪಂದದಲ್ಲಿರುವ ಆಟಗಾರ ಗಾಯದಿಂದ ಟೂರ್ನಿಯಿಂದ ಹೊರಬಿದ್ದರೆ ಅವರ ಸಂಬಳವನ್ನು ಮಂಡಳಿಯೇ ನೀಡುತ್ತದೆ. ಈ ನಿಯಮದ ಪ್ರಯೋಜನವನ್ನು ರಿಷಭ್ ಪಂತ್ ಮತ್ತು ದೀಪಕ್ ಚಹಾರ್ ಕೂಡ ಹಿಂದೆ ಪಡೆದಿದ್ದರು.
ಇದೀಗ ಕೆಕೆಆರ್ ತಂಡ ಜಿಂಬಾಬ್ವೆಯ ವೇಗಿ ಬ್ಲೆಸಿಂಗ್ ಮುಜರಬಾನಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮುಸ್ತಾಫಿಜುರ್ ರಹಮಾನ್ ಅವರ ಬದಲಿಯಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ಹರ್ಷಿತ್ ರಾಣಾ ಬದಲಿಗೆ ಸೂಕ್ತ ಆಟಗಾರನನ್ನು ಹುಡುಕುವುದು ಈಗ ಕೆಕೆಆರ್ ತಂಡದ ಪ್ರಮುಖ ಸವಾಲಾಗಿದೆ.



