ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 27 ರನ್ಗಳ ಹೀನಾಯ ಸೋಲು ಅನುಭವಿಸಿದೆ. ಗುವಾಹಟಿಯ ಬರ್ಸಪರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ಬ್ಯಾಟರ್ಗಳ ಅಬ್ಬರಕ್ಕೆ ಮುಂಬೈ ಬೌಲಿಂಗ್ ವಿಭಾಗ ಪತರುಗುಟ್ಟಿದೆ.
ಮಳೆಯ ಕಾರಣದಿಂದಾಗಿ 11 ಓವರ್ಗಳಿಗೆ ಸೀಮಿತಗೊಂಡಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್, ಕೇವಲ 66 ಎಸೆತಗಳಲ್ಲಿ 150 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 11 ಓವರ್ಗಳಲ್ಲಿ 123 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಸೋಲಿನ ಬಳಿಕ ಪಂದ್ಯದ ವಿಶ್ಲೇಷಣೆ ನಡೆಸಿದ ನಾಯಕ ಹಾರ್ದಿಕ್ ಪಾಂಡ್ಯ, ಸೋಲಿಗೆ ಬೌಲಿಂಗ್ ವಿಭಾಗದ ವೈಫಲ್ಯವೇ ಕಾರಣ ಎಂದು ನೇರವಾಗಿಯೇ ಕಿಡಿಕಾರಿದ್ದಾರೆ.
“ನಾವು ಪವರ್ಪ್ಲೇನಲ್ಲಿ ಅಂದುಕೊಂಡಂತೆ ಬೌಲಿಂಗ್ ಮಾಡಲು ವಿಫಲರಾದೆವು. ಒಂದು ಬೌಲಿಂಗ್ ಯುನಿಟ್ ಆಗಿ ನಾವು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಎದುರಾಳಿ ಬ್ಯಾಟರ್ಗಳು ನಮ್ಮ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಈ ಸೋಲಿಗೆ ನಮ್ಮ ಬೌಲರ್ಗಳೇ ನೇರ ಹೊಣೆ,” ಎಂದು ಪಾಂಡ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸೋಲಿಗೆ ಬ್ಯಾಟಿಂಗ್ ವಿಭಾಗವನ್ನು ಹೊಣೆ ಮಾಡದ ಪಾಂಡ್ಯ, “ನಾವು ಕೇವಲ 27 ರನ್ಗಳಿಂದ ಸೋತಿದ್ದೇವೆ. ಒಂದು ವೇಳೆ ನಮ್ಮ ಬೌಲರ್ಗಳು ಕೇವಲ ಐದು ಎಸೆತಗಳನ್ನು ಸರಿಯಾಗಿ ಹಾಕಿದ್ದರೆ ಅಥವಾ ಐದು ಸಿಕ್ಸರ್ಗಳನ್ನು ತಡೆದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು. ಆದರೆ ಆ ಕನಿಷ್ಠ ಪ್ರಯತ್ನವೂ ನಮ್ಮ ಬೌಲಿಂಗ್ ಪಡೆಯಿಂದ ಬರಲಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.



