ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ಅಸ್ಪತ್ರೆಯವರಿಗೆ ಬುದ್ದಿ ಕಲಿಸಲು ಮಹಾನಗರ ಬಳ್ಳಾರಿ ಪಾಲಿಕೆ ಸಿಬ್ಬಂದಿ ಕಸವನ್ನು ತಂದು ಆಸ್ಪತ್ರೆ ಮುಂದೆ ಸುರಿದು ಬಿಸಿ ಮುಟ್ಟಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಷ್ಟೇ ಅಲ್ಲದೆ ಇಡೀ ರಾಜ್ಯದಲ್ಲಿ ಕಸ ಮನೆ ಮುಂದೆ ಸುರಿಯಲಾಗುತ್ತಿದೆ. ಆಸ್ಪತ್ರೆಯ ಕಸವನ್ನು ಸರಿಯಾಗಿ ವಿಂಗಡಿಸದೆ ರಸ್ತೆ ಬದಿ ಹಾಕಿದ್ದವರಿಗೆ ಬುದ್ಧಿ ಕಲಿಸಲಾಗಿದೆ.
ಬಳ್ಳಾರಿಯ ಪಾರ್ವತಿ ನಗರದ ಪದ್ಮಾವತಿ ಕಿಡ್ನಿಕೇರ್ ಸೆಂಟರ್ ಮತ್ತು ಮೋಕಾ ರಸ್ತೆಯ ದ್ವಾರಕಾ ಆಸ್ಪತ್ರೆ ಮುಂದೆ ಪಾಲಿಕೆ ಸಿಬ್ಬಂದಿ ವಾಹನದಲ್ಲಿ ಕಸ ತಂದು ಸುರಿದಿದ್ದಾರೆ.
ಪದ್ಮಾವತಿ ಕಿಡ್ನಿಕೇರ್ ಆಸ್ಪತ್ರೆ ಮತ್ತು ದ್ವಾರಕ ಅಸ್ಪತ್ರೆ ಸಿಬ್ಬಂದಿ ಮೆಡಿಕಲ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದರು. ಈ ಎರಡು ಆಸ್ಪತ್ರೆಗೆ ಪಾಲಿಕೆ ನೋಟಿಸ್ ನೀಡಿದರೂ ಎಚ್ಚೆತ್ತುಕೊಂಡಿರಲಿಲ್ಲ.
ದಂಡ ಹಾಕಿದರೂ ಸರಿಯಾಗಿ ಕಟ್ಟದೇ ಉಡಾಫೆ ಮಾತನಾಡುತ್ತಿದ್ದರು. ಹೀಗಾಗಿ ಇಂದು ಬೆಳ್ಳಂಬೆಳಿಗ್ಗೆ ಆಸ್ಪತ್ರೆ ಮುಂದೆ ಪಾಲಿಕೆ ಸಿಬ್ಬಂದಿ ಕಸ ಸುರಿದಿದ್ದಾರೆ. ಹೀಗೆಯೇ ಮುಂದುವರಿದರೆ ಯಾರಾದರೂ ಕಸ ಎಲ್ಲೆಂದರಲ್ಲಿ ಅವರಿಗೂ ಹೀಗೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.



