March 26, 2026
Thursday, March 26, 2026
spot_img

ತುಮಕೂರಿನಲ್ಲಿ ಲಂಚ ಪಡೆಯುವಾಗಲೇ ಸಿಕ್ಕಿ ಬಿದ್ದ ಜಂಟಿ ನಿರ್ದೇಶಕ, ಸಹಾಯಕ

ಹೊಸದಿಗಂತ ವರದಿ ತುಮಕೂರು:

ಸಣ್ಣ ಉದ್ದಿಮೆದಾರರೊಬ್ಬರಿಗೆ ಸಹಾಯ ಧನ ಮಂಜೂರು ಮಾಡಲು 1.15 ಲಕ್ಷ ಲಂಚದ ಹಣ ಪಡೆಯುತ್ತಿದ್ದಾಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಸಹಾಯಕ ಎನ್.ಎಸ್.ಪ್ರಸಾದ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಒಟ್ಟು 1.25 ಲಕ್ಷ ಲಂಚಕ್ಕೆ ಒತ್ತಾಯಿಸಿದ್ದು, ಮುಂಗಡವಾಗಿ 10 ಸಾವಿರ ಹಣ ಪಡೆದುಕೊಂಡಿದ್ದರು. ಗುರುವಾರ ಮಧ್ಯಾಹ್ನ ಉಳಿದ 1.15 ಲಕ್ಷ ಹಣ ತೆಗೆದುಕೊಳ್ಳುವ ಸಮಯದಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ.

ನಗರದ ವಿಜಯನಗರ ಬಡಾವಣೆಯ ಎಂ.ಎಸ್.ಚನ್ನಬಸವೇಶ್ವರ ಅವರು ತಾಲ್ಲೂಕಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಶಿವಲಿಂಗ ಇಂಡಸ್ಟ್ರೀಸ್ ಸ್ಥಾಪಿಸಿ ಸಣ್ಣ ಉದ್ದಿಮೆ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನಲ್ ತಯಾರಿಸುತ್ತಿದ್ದಾರೆ. ಮೊದಲ ಬಾರಿಗೆ ಸಣ್ಣ ಉದ್ದಿಮೆ ಆರಂಭಿಸಿದವರಿಗೆ ರಾಜ್ಯ ಸರ್ಕಾರದಿಂದ ಸಹಾಯ ಧನ ನೀಡಲಾಗುತ್ತಿದೆ. ಹಾಗಾಗಿ ಸಹಾಯ ಧನ ಮಂಜೂರು ಮಾಡುವಂತೆ ಕೋರಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದರು.

ಚನ್ನಬಸವೇಶ್ವರ ಅವರಿಗೆ 18.75 ಲಕ್ಷ ಸಹಾಯ ಧನ ಮಂಜೂರು ಮಾಡಬೇಕಿತ್ತು. ಈ ಹಣ ಮಂಜೂರು ಮಾಡಿಕೊಡಲು ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಅವರ ಸಹಾಯಕ ಎನ್.ಎಸ್.ಪ್ರಸಾದ್ 1.25 ಲಕ್ಷ ಲಂಚಕ್ಕೆ ಒತ್ತಾಯಿಸಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಮುಂಗಡವಾಗಿ 10 ಸಾವಿರ ಪಡೆದುಕೊಂಡಿದ್ದರು. ಉಳಿದ 1.15 ಲಕ್ಷ ಹಣವನ್ನು ನಗರದ ಬಿ.ಎಚ್.ರಸ್ತೆಯಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿ ಮುಂಭಾಗ ಲಿಂಗರಾಜು ಪರವಾಗಿ ಪ್ರಸಾದ್ ಪಡೆದುಕೊಳ್ಳುವ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ.ಲಕ್ಷ್ಮಿನಾರಾಯಣ್, ಡಿವೈಎಸ್‌ಪಿ ಕೆ.ಎಂ.ಸಂತೋಷ್, ಎಂ.ಮಂಜುನಾಥ, ಇನ್‌ಸ್ಪೆಕ್ಟರ್‌ಗಳಾದ ಕೆ.ಸುರೇಶ, ಬಿ.ಮೊಹಮ್ಮದ್ ಸಲೀಂ ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !