March 6, 2026
Friday, March 6, 2026
spot_img

ರೈಲಿನ ಶೌಚಾಲಯದಲ್ಲಿ ನ್ಯಾಯಾಧೀಶರ ಪತ್ನಿ ಶವವಾಗಿ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಜೈಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಜ್‌ಕುಮಾರ್ ಚೌಹಾಣ್ ಅವರ ಪತ್ನಿ ರೈಲಿನ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ರಾಜ್‌ಕುಮಾರ್ ಚೌಹಾಣ್‌ ಮತ್ತು ಅವರ ಪತ್ನಿ ಉಷಾ ಚೌಹಾಣ್ ಜೋಧ್‌ಪುರದಿಂದ ನಿಂಬಾಹೆರಾಗೆ ಕಾಂಚಿಗುಡ-ಭಗತ್ ಕಿ ಕೋಥಿ ಎಕ್ಸ್‌ಪ್ರೆಸ್ (17606)ನಲ್ಲಿ ಪ್ರಯಾಣಿಸುತ್ತಿದ್ದರು.

ಶೌಚಾಲಯಕ್ಕೆ ತೆರಳಿದ್ದ ಉಷಾ, ಹೆಚ್ಚು ಸಮಯವಾದರೂ ಶೌಚಾಲಯದಿಂದ ಹೊರಬಂದಿರಲಿಲ್ಲ. ಬಳಿಕ ಶೌಚಾಲಯದ ಬಾಗಿಲನ್ನು ರಕ್ಷಣಾ ತಂಡ ಒಡೆದು ಅಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಉಷಾ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರು ಮೃತಪಟ್ಟಿರುವುದು ತಿಳಿದುಬಂದಿದೆ.

ನ್ಯಾಯಾಧೀಶ ರಾಜ್‌ಕುಮಾರ್ ಚೌಹಾಣ್ ಮತ್ತು ಅವರ ಪತ್ನಿ ಒಟ್ಟಿಗೆ ಪ್ರಯಾಣಿಸುತ್ತಿದ್ದರೂ, ಅವರು ಪ್ರತ್ಯೇಕ ಬೋಗಿಗಳಲ್ಲಿ ಕುಳಿತಿದ್ದರು. ರೈಲು ನಿಂಬಾಹೆರಾಕ್ಕೆ ಬರುವ ಸ್ವಲ್ಪ ಸಮಯದ ಮೊದಲು, ಉಷಾ ಚೌಹಾಣ್ ತನ್ನ ಪತಿಗೆ ಕರೆ ಮಾಡಿ ತಾನು ಶೌಚಾಲಯಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದರು. ರೈಲು ನಿಂಬಾಹೆರಾ ನಿಲ್ದಾಣವನ್ನು ತಲುಪಿದಾಗ, ನ್ಯಾಯಾಧೀಶರು ಇಳಿದು ತಮ್ಮ ಪತ್ನಿಗಾಗಿ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದರು. ಅವರು ಕಾಣಿಸದಿದ್ದಾಗ, ಆತಂಕಗೊಂಡ ಚೌಹಾಣ್‌ ಜಿಆರ್‌ಪಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಜಿಆರ್‌ಪಿ ತಂಡವು ನಿಂಬಹೆರಾ ನಿಲ್ದಾಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತ್ತು. ರೈಲಿನಿಂದ ಉಷಾ ಚೌಹಾಣ್ ಇಳಿದಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಮೇಲೆ ಅವರು ರೈಲಿನಲ್ಲೇ ಇರ ಬಹುದು ಎಂದು ಅರಿತು ರೈಲು ಮಂದಸೌರ್ ಕಡೆಗೆ ಚಲಿಸುತ್ತಿದ್ದಂತೆ ಹುಡುಕಾಟ ತೀವ್ರಗೊಳಿಸಲಾಯಿತು.

ಈ ವೇಳೆ, ಲಾಕ್‌ ಆಗಿದ್ದ ಶೌಚಾಲಯದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಬಾಗಿಲು ತೆರೆಯದಿದ್ದಾಗ, ಬಾಗಿಲನ್ನು ಒಡೆದಿದ್ದಾರೆ. ಅಲ್ಲಿ, ಉಷಾ ಪ್ರಜ್ಞಾಹೀನರಾಗಿ ಬಿದ್ದಿದ್ದರು ಎಂದು ವರದಿಯಾಗಿದೆ.ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಉಷಾ ಆಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ.

ಉಷಾ ಅವರಿಗೆ ಮೂಕ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕುಟುಂಬವು ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದರಿಂದ ಅಗತ್ಯ ಕಾನೂನು ನಿಯಮಗಳನ್ನು ಪೂರ್ಣಗೊಳಿಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !