February 9, 2026
Monday, February 9, 2026
spot_img

ಕಳಸಾ ಬಂಡೂರಿ ವಿವಾದ! ಸಿಎಂ ಅನಾವಶ್ಯಕವಾಗಿ ಕೇಂದ್ರದ ವಿರುದ್ಧ ಆರೋಪ ಮಾಡ್ತಿದಾರೆ: ಬೆಲ್ಲದ

ಹೊಸದಿಗಂತ ವರದಿ ಹುಬ್ಬಳ್ಳಿ:

ಕಳಸಾ ಬಂಡೂರಿ ಯೋಜನೆ ವಿವಾದ ನ್ಯಾಯಾಲಯದ್ದಲ್ಲಿದ್ದು, ರಾಜ್ಯ ಸರ್ಕಾರ ಸೂಕ್ತ ವಾದ ಮಂಡಿಸಿ ಸಮಸ್ಯೆ ಪರಿಹರಿಸಿಕೊಳ್ಳವುದು ಬಿಟ್ಟು, ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವಶ್ಯಕವಾಗಿ ಕೇಂದ್ರ ಸರ್ಕಾರ ಹಾಗೂ ಪ್ರಹ್ಲಾದ ಜೋಶಿ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆ ಅನುಷ್ಠಾನಗೊಳಿಸಲು ಬಹುತೇಕ ಕೆಲಸಗಳನ್ನು ಬಿಜೆಪಿ ಮಾಡಿದೆ. ಈ ಬಗ್ಗೆ ಏನು ಮಾಡದ ಕಾಂಗ್ರೆಸ್ ಸರ್ಕಾರವೂ ವನ್ಯಜೀವಿ ಮಂಡಳಿ ಅನುಮತಿ ಕೊಡಿಸುತ್ತಿಲ್ಲ ಎಂದು ಸುಳ್ಳು ಆರೋಪ ಮಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಸುಳ್ಳು ಘೋಷಣೆ, ಆರೋಪಗಳ ಮಾಡಿ ಅಽಕಾರಕ್ಕೆ ಬರಲು ಕಾಂಗ್ರೆಸ್ ಇಂತಹ ಕೆಲಸ ಮಾಡುತ್ತದೆ ಎಂದರು.

ಕಳಸಾ ಬಂಡೂರಿ ಯೋಜನೆ ವಿವಾದ ನ್ಯಾಯಾಲಯದಲ್ಲಿ ಇತ್ತು. ಸುಪ್ರೀಂ ಕೋರ್ಟ್ ನೀರು ಬಳಸಲು ಆದೇಶಿದ್ದು, ಪರಿಸರ, ವನ್ಯಜೀವಿ ಮಂಡಳಿ ಅನುಮತಿ ಪಡೆಯಲು ಸೂಚಿಸಿತ್ತು. ಕೇಂದ್ರ ಸರ್ಕಾರ ಪರಿಸರ ಇಲಾಖೆ ಅನುಮತಿ ನೀಡಿದ್ದು, ವನ್ಯ ಮಂಡಳಿ ಅನುಮತಿ ಸಲುವಾಗಿ ಗೋವಾ ನ್ಯಾಯಾಲಯ ಮೊರೆ ಹೋಗಿದೆ. ಕರ್ನಾಟಕ ಸರ್ಕಾರ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯದಿಂದ ಸಮಸ್ಯೆ ಬಗೆಹರಿಯಬೇಕಿದೆ. ಇಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿಲ್ಲ. ಕಾನೂನು ಸಚಿವ ಎಚ್.ಕೆ. ಪಾಟೀಲ ಅವರ ಸಂಬಂಽ ವಕೀಲರಿದ್ದು, ಸೂಕ್ತವಾಗಿ ವಾದ ಮಾಡಿ ತಕ್ಷಣ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಕೇಂದ್ರದ ಮೇಲೆ ಗೋಬೆ ಕೂಡಿಸುವುದು ಸರಿಯಲ್ಲ ಎಂದು ಹರಿಹಾಯ್ದರು.

ಅಪರ್ ಕೃಷ್ಣ ಯೋಜನೆ ಬಗ್ಗೆ ಪುಸ್ತಕ ಬರೆದಿರುವ ಎಚ್.ಕೆ. ಪಾಟೀಲ ಅವರು ತಮ್ಮದೇ ಸರ್ಕಾರವಿದ್ದರೂ ಏನು ಮಾಡುತ್ತಿಲ್ಲ. ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ೧೦ ಸಾವಿರ ಕೋಟಿ ನೀಡುವುದಾಗಿ ಘೋಷಿಸಿದ್ದು, ಇಲ್ಲಿವರೆಗೂ ಒಂದು ರೂಪಾಯಿ ನೀಡಿಲ್ಲ. ಮೇಕೆದಾಟು ಬಗ್ಗೆ ಹೋರಾಟ ಮಾಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ ಸರ್ಕಾರ ಅಽಕಾರದಲ್ಲಿದ್ದರೂ ಏನು ಮಾಡುತ್ತಿಲ್ಲ. ಕಾಂಗ್ರೆಸ್ ಕೇವಲ ಘೋಷಣೆಗೆ ಸಿಮೀತವಾಗಿದೆ ಎಂದರು.

ವನ್ಯಜೀವಿ ಮಂಡಳಿ ಅನುಮತಿಗೆ ನ್ಯಾಯಾಲಯದಲ್ಲಿರುವ ಸಮಸ್ಯೆ ಪರಿಹಾರವಾಗಬೇಕಿದೆ. ರಾಜ್ಯ ಸರ್ಕಾರ ಆಸಕ್ತಿ ವಹಿಸಿ ನ್ಯಾಯಾಲಯದ ಸರಿಯಾಗಿ ವಾದ ಮಂಡಿಸಬೇಕು. ಈ ವಿಚಾರದಲ್ಲಿ ರಾಜಕಾರಣ ಮಾಡುವುದು ಬಿಟ್ಟು, ಪಕ್ಷಾತೀತವಾಗಿ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಕಿಡಿಕಾರಿದರು.

ಮಾಜಿ ವಿಧಾನ ಪರಿಷತ ಸದಸ್ಯ ನಾಗರಾಜ ಛಬ್ಬಿ, ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಹೇಂದ್ರ ಕೌತಾಳ, ಮೇಯರ್ ಜ್ಯೋತಿ ಪಾಟೀಲ, ವಸಂತ ನಾಡಜೋಶಿ, ರಾಜು ಕೋರ್ಯಾಣಮಠ ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !