ಹೊಸದಿಗಂತ ಹುಬ್ಬಳ್ಳಿ:
“ಜಮ್ಮು ಮತ್ತು ಕಾಶ್ಮೀರದಲ್ಲೂ ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ ಎಂಬುದು ಇಡೀ ದೇಶಕ್ಕೆ ತಿಳಿಯುವ ಸಮಯ ಬಂದಿದೆ. ನಾವು ಬರಿ ಆಡಲು ಬಂದಿಲ್ಲ, ಟ್ರೋಫಿ ಗೆದ್ದೇ ತೀರುತ್ತೇವೆ,” ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸಂಜೆ ಹುಬ್ಬಳ್ಳಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಮ್ಮ ರಾಜ್ಯದ ಕ್ರಿಕೆಟ್ ತಂಡದ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ರಣಜಿ ಟ್ರೋಫಿ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಜಮ್ಮು-ಕಾಶ್ಮೀರ ತಂಡದ ಬಗ್ಗೆ ಸಿಎಂ ಹೆಮ್ಮೆ ವ್ಯಕ್ತಪಡಿಸಿದರು.
ಫೈನಲ್ನಲ್ಲಿ ನಮ್ಮ ತಂಡದ ಗೆಲುವು ಕಷ್ಟ ಎಂದು ಭಾವಿಸಲಾಗಿತ್ತು. ಆದರೆ, ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡ ತಿರುಗೇಟು ನೀಡಿದೆ ಎಂದರು.
“ನಮ್ಮ ಹುಡುಗರಿಗೆ ಪ್ರತಿಭೆಯಿದೆ, ಆದರೆ ಸರಿಯಾದ ಅವಕಾಶಗಳಿರಲಿಲ್ಲ. ಈಗ ರಣಜಿ ಫೈನಲ್ ಆಡುತ್ತಿರುವುದು ಅವರಿಗೆ ದೊಡ್ಡ ವೇದಿಕೆ ಕಲ್ಪಿಸಿದೆ. ಈ ತಂಡದ ಒಂದಿಬ್ಬರು ಆಟಗಾರರು ಶೀಘ್ರದಲ್ಲೇ ಟೀಮ್ ಇಂಡಿಯಾ ಪರ ಆಡುವ ಎಲ್ಲ ಅರ್ಹತೆ ಹೊಂದಿದ್ದಾರೆ,” ಎಂದು ಅವರು ಆಶಯ ವ್ಯಕ್ತಪಡಿಸಿದರು.



