March 15, 2026
Sunday, March 15, 2026
spot_img

ಡಿಕೆಶಿ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು: “45 ದಿನ ಕಾಯಿರಿ, ಎಲ್ಲವೂ ಗೊತ್ತಾಗುತ್ತೆ” ಎಂದ ಎಚ್ ಡಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇವರ ಜೊತೆ ಮಾತನಾಡಿದ್ದೇನೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತೀಕ್ಷ್ಣ ವ್ಯಂಗ್ಯವಾಡಿದ್ದಾರೆ. “ದೇವರ ಜೊತೆ ಮಾತುಕತೆ ನಡೆದಿದೆ ಅಂದ್ರೆ 45 ದಿನ ಕಾದು ನೋಡೋಣ. ಆಗ ಏನು ನಡೆಯುತ್ತದೆ ಅನ್ನೋದು ಜನರಿಗೇ ಸ್ಪಷ್ಟವಾಗುತ್ತದೆ” ಎಂದು ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಡೆ-ನುಡಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಮುಂದಿನ ಮೂರು ಬಜೆಟ್‌ಗಳನ್ನು ತಾವೇ ಮಂಡಿಸುವುದಾಗಿ ಹೇಳುತ್ತಿದ್ದಾರೆ. ಸದ್ಯಕ್ಕೆ ಅಧಿಕಾರದಲ್ಲಿದ್ದಾರೆ, ಮುಂದೇನು ಆಗುತ್ತೆ ಅನ್ನೋದನ್ನು ಕಾಲವೇ ತೋರಿಸಲಿದೆ ಎಂದು ಹೇಳಿದರು.

ವಿಧಾನಸಭಾ ಕಲಾಪಗಳ ವಿಚಾರಕ್ಕೆ ಬಂದ ಎಚ್‌ಡಿಕೆ, ವಿರೋಧ ಪಕ್ಷಗಳ ಧ್ವನಿಯನ್ನು ದಮನ ಮಾಡಿ ಚರ್ಚೆಯಿಲ್ಲದೇ ಬಿಲ್‌ಗಳನ್ನು ಅಂಗೀಕರಿಸಲಾಗುತ್ತಿದೆ ಎಂದು ಆರೋಪಿಸಿದರು. ಭ್ರಷ್ಟಾಚಾರದ ಬಗ್ಗೆ ಈಗಲೇ ಎಲ್ಲವನ್ನೂ ಹೇಳುವುದಿಲ್ಲ. ಸಮಯ ಬಂದಾಗ ದಾಖಲೆಗಳೊಂದಿಗೆ ಸತ್ಯವನ್ನು ಬಹಿರಂಗಪಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಕುರಿತ ಚರ್ಚೆಗಳು ಜನರಿಗೆ ಮನರಂಜನೆಯ ವಿಷಯವಾಗಿ ಬದಲಾಗಿವೆ ಎಂದು ಟೀಕಿಸಿದರು. ಕಳೆದ ಮೂರು ವರ್ಷಗಳಲ್ಲಿ ರೈತರ ಸ್ಥಿತಿ ಕಳಪೆಯಾಗಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಸಾರ್ವಜನಿಕ ಹಣ ದುರುಪಯೋಗವಾಗುತ್ತಿದೆ ಎಂದರು. ರಸ್ತೆ ಸ್ಥಿತಿಯೇ ಸರ್ಕಾರದ ಸಾಧನೆಯ ನೈಜ ಚಿತ್ರಣ ಎಂದು ಹೇಳಿದ ಅವರು, ಕಡಿಮೆ ದೂರಕ್ಕೂ ಹೆಲಿಕಾಪ್ಟರ್ ಬಳಸುವ ಮೂಲಕ ಕೋಟಿ ಕೋಟಿ ಹಣ ವ್ಯಯವಾಗುತ್ತಿದೆ ಎಂದು ಕಿಡಿಕಾರಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !