ಒಮ್ಮೆ ಶಾಂತವಾಗಿ ಕುಳಿತು ಯೋಚಿಸಿದರೆ ಒಂದು ಸತ್ಯ ಗೊತ್ತಾಗುತ್ತೆ, ನಾವು ಬದುಕುತ್ತಿರುವುದಕ್ಕಿಂತ ಹೆಚ್ಚು, ಇತರರಿಗೆ ಒಳ್ಳೆಯವರಾಗಿರಲು ಪ್ರಯತ್ನಿಸುತ್ತಿದ್ದೇವೆ ಅಂತ. ನಮ್ಮ ಮಾತು, ನಮ್ಮ ನಿರ್ಧಾರ, ನಮ್ಮ ಮೌನ ಕೂಡ ಯಾರನ್ನಾದರೂ ತೃಪ್ತಿಪಡಿಸಬೇಕೆಂಬ ಉದ್ದೇಶದಿಂದಲೇ ಹುಟ್ಟುತ್ತದೆ. ಆದರೆ ಆ ಹವ್ಯಾಸವನ್ನು ನಿಧಾನವಾಗಿ ಬಿಡಲು ಆರಂಭಿಸಿದ ಕ್ಷಣದಿಂದ ಜೀವನವೇ ಬೇರೆ ಭಾಷೆಯಲ್ಲಿ ಮಾತನಾಡತೊಡಗುತ್ತದೆ.
ಮೊದಲಿಗೆ ಮನಸ್ಸಿನಲ್ಲಿ ನಡೆಯುವ ಗದ್ದಲ ಕಡಿಮೆಯಾಗುತ್ತದೆ. “ಅವರು ಏನು ಅಂದುಕೊಳ್ಳುತ್ತಾರೆ?” ಅನ್ನೋ ಶಬ್ದ ನಿಧಾನವಾಗಿ ಮೌನವಾಗುತ್ತದೆ. ಎಲ್ಲರ ನಿರೀಕ್ಷೆಗಳನ್ನು ಹೊತ್ತು ಸಾಗುವ ಬದಲು, ನಮ್ಮ ಉಸಿರನ್ನು ನಾವು ಅನುಭವಿಸಲು ಆರಂಭಿಸುತ್ತೇವೆ. ಈ ಹಗುರತನವೇ ಒಂದು ಹೊಸ ಅನುಭವ.
ಆಮೇಲೆ ‘ಇಲ್ಲ’ ಅನ್ನೋ ಪದಕ್ಕೆ ಹೊಸ ಅರ್ಥ ಸಿಗುತ್ತೆ. ಯಾರನ್ನಾದರೂ ನೋಯಿಸಿಬಿಡುತ್ತೀನೋ ಅನ್ನುವ ಭಯಕ್ಕಿಂತ, ನನ್ನನ್ನು ನಾನು ಕಳೆದುಕೊಳ್ಳಬಾರದು ಅನ್ನೋ ಅರಿವು ದೊಡ್ಡದಾಗುತ್ತದೆ. ಇದು ಕಠಿಣತೆ ಅಲ್ಲ, ಇದು ಸ್ವಯಂ ಗೌರವ.
ಈ ಪ್ರಕ್ರಿಯೆಯಲ್ಲಿ ಕೆಲವು ಜನ ದೂರವಾಗಬಹುದು. ಆದರೆ ಅದೇ ಸತ್ಯ. ನಮ್ಮ ನಿಜವಾದ ಸ್ವಭಾವದ ಜೊತೆ ಇರಲಾರದವರು ತಾವೇ ಹಿಂದೆ ಸರಿಯುತ್ತಾರೆ. ಉಳಿಯುವವರು ಮಾತ್ರ ನಿಜವಾದವರು ಅನ್ನೋದು ಸ್ಪಷ್ಟವಾಗುತ್ತದೆ.
ನಿಧಾನವಾಗಿ ಆತ್ಮವಿಶ್ವಾಸ ಹೊರಗಿನಿಂದ ಅಲ್ಲ, ಒಳಗಿನಿಂದ ಬರತೊಡಗುತ್ತದೆ. ಯಾರ ಒಪ್ಪಿಗೆಯೂ ನಮ್ಮ ಮೌಲ್ಯವನ್ನು ನಿರ್ಧರಿಸೋದಿಲ್ಲ ಅನ್ನೋ ಭಾವನೆ ಗಟ್ಟಿಯಾಗುತ್ತದೆ. ನಾವು ನಮಗೇ ಸಾಕು ಅನ್ನೋ ಶಾಂತಿ ಅಲ್ಲಿ ಹುಟ್ಟುತ್ತದೆ.
ಜೀವನದ ದಿಕ್ಕು ಕೂಡ ಸ್ಪಷ್ಟವಾಗತೊಡಗುತ್ತದೆ. ಎಲ್ಲರ ಸಲಹೆ ಕೇಳುತ್ತಾ ಗೊಂದಲವಾಗುವುದಿಲ್ಲ. ನಮ್ಮ ಒಳಗಿನ ಧ್ವನಿಗೆ ನಾವು ಮೊದಲ ಬಾರಿ ಸಮಯ ಕೊಡುತ್ತೇವೆ. ಅದೇ ನಿಜವಾದ ಮಾರ್ಗದರ್ಶಿ ಆಗುತ್ತದೆ. ಕೊನೆಗೆ ಒಂದು ಸತ್ಯ ಅರ್ಥವಾಗುತ್ತದೆ ಜನರನ್ನು ತೃಪ್ತಿಪಡಿಸುವುದನ್ನು ಬಿಟ್ಟ ದಿನದಿಂದಲೇ ಬದುಕು ಚಂದವಾಗುತ್ತದೆ. ದೊಡ್ಡ ಸಾಧನೆಗಳಿಂದಲ್ಲ, ನಟನೆಯಿಲ್ಲದ ಸರಳ ಜೀವನದಿಂದ


