Monday, January 12, 2026

ಮಣಿಪುರ ಧೈರ್ಯ, ದೃಢಸಂಕಲ್ಪದ ಭೂಮಿ, ಹೊಸ ಭವಿಷ್ಯ ಕಟ್ಟುವಲ್ಲಿ ಎಲ್ಲರೂ ಶ್ರಮಿಸೋಣ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

2023ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮೊದಲ ಬಾರಿಗೆ ಮಣಿಪುರಕ್ಕೆ ಭೇಟಿ ನೀಡಿದ್ದು, ಈ ಜನತೆಯಲ್ಲಿ ತಮ್ಮ ಮಕ್ಕಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಶಾಂತಿಯನ್ನು ಆರಿಸಿಕೊಳ್ಳುವಂತೆ ಒತ್ತಾಯಿಸಿದರು.

ಇಂದು ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಾನು ಮತ್ತು ಭಾರತ ಸರ್ಕಾರ ರಾಜ್ಯದ ಜನರೊಂದಿಗೆ ನಿಲ್ಲುತ್ತೇವೆ. ಹಾಗೇ, ಮಣಿಪುರದಲ್ಲಿ ಶಾಂತಿ ಮತ್ತು ಏಕತೆಗಾಗಿ ಮನವಿ ಮಾಡಿದರು.

ಮಣಿಪುರ ಭಾರತದ ಪ್ರಗತಿಯ ಪ್ರಮುಖ ಸ್ತಂಭವಾಗಿದೆ. ಮಣಿಪುರದ ಭೂಮಿ ಧೈರ್ಯ ಮತ್ತು ದೃಢಸಂಕಲ್ಪದ ಭೂಮಿ. ಈ ಬೆಟ್ಟಗಳು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದೆ ಮತ್ತು ಅದೇ ಸಮಯದಲ್ಲಿ, ಅವು ನಿಮ್ಮ ನಿರಂತರ ಕಠಿಣ ಪರಿಶ್ರಮವನ್ನು ಸಂಕೇತಿಸುತ್ತವೆ. ಮಣಿಪುರದ ಜನರ ಚೈತನ್ಯಕ್ಕೆ ನಾನು ವಂದಿಸುತ್ತೇನೆ ಎಂದರು.

ಎಲ್ಲಾ ಸಂಸ್ಥೆಗಳು ಶಾಂತಿಯುತವಾಗಿ ಒಟ್ಟಾಗಿ ಮುಂದುವರಿಯಿರಿ, ನಿಮ್ಮ ಕನಸುಗಳನ್ನು ನನಸಾಗಿಸಿ ಮತ್ತು ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಿ. ಮಣಿಪುರ ಒಂದು ಕಾಲದಲ್ಲಿ ಭರವಸೆ ಮತ್ತು ಕನಸುಗಳನ್ನು ಹೊಂದಿತ್ತು, ಆದರೆ ಹಿಂಸಾಚಾರದ ಹಿಡಿತದಲ್ಲಿ ಸಿಲುಕಿತ್ತು. ಎಲ್ಲಿಯಾದರೂ ಅಭಿವೃದ್ಧಿ ನಡೆಯಬೇಕಾದರೆ, ಸತ್ಯ ಮತ್ತು ನ್ಯಾಯದ ಜೊತೆಗೆ ಶಾಂತಿ ಅತ್ಯಗತ್ಯ ಎಂದು ಅವರು ಹೇಳಿದರು.

ಇತ್ತೀಚೆಗೆ ಬೆಟ್ಟಗಳು ಮತ್ತು ಕಣಿವೆಗಳಲ್ಲಿ, ವಿವಿಧ ಗುಂಪುಗಳೊಂದಿಗೆ ಒಪ್ಪಂದ ಮಾತುಕತೆಗಳು ನಡೆದಿವೆ ಎಂದು ನಾವು ತೃಪ್ತರಾಗಿದ್ದೇವೆ. ಇವು ಭಾರತ ಸರ್ಕಾರದ ಪ್ರಯತ್ನದ ಭಾಗವಾಗಿದ್ದು, ಸಂವಾದ, ಗೌರವ ಮತ್ತು ಪರಸ್ಪರ ತಿಳುವಳಿಕೆಗೆ ಪ್ರಾಮುಖ್ಯತೆ ನೀಡುತ್ತಾ ಶಾಂತಿಯನ್ನು ಸ್ಥಾಪಿಸುವ ಕೆಲಸ ಮಾಡುತ್ತೇವೆ ಎಂದರು.

ಕೇಂದ್ರ ಸರ್ಕಾರ ಮಣಿಪುರದಲ್ಲಿ ಜೀವನವನ್ನು ಮರಳಿ ಹಳಿಗೆ ತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ, ನಮ್ಮ ಸರ್ಕಾರವು 7,000 ಹೊಸ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.

ಮಣಿಪುರದ ಎಲ್ಲಾ ಜನಾಂಗೀಯ ಸಂಘಟನೆಗಳು ಪರಸ್ಪರ ದ್ವೇಷ ಭಾವನೆಯನ್ನು ತೊರೆದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಒಟ್ಟಾಗಬೇಕು. ಪರಸ್ಪರ ಗೌರವ ಮತ್ತು ನಂಬಿಕೆಯ ಆಧಾರದ ಮೇಲೆ ಹೊಸ ಭವಿಷ್ಯ ಕಟ್ಟುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಪಧಾನಿ ಮೋದಿ ಕರೆ ನೀಡಿದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!