ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಲ ಮಾಡಿ ಮಗನಂತೆ ಸಾಕಿದ್ದ ಅಡಿಕೆ ಸಸಿಗಳು ಕಣ್ಣೆದುರೇ ಸುಟ್ಟು ಬೂದಿಯಾದಾಗ ಆ ರೈತನ ಆಕ್ರಂದನ ಮುಗಿಲು ಮುಟ್ಟಿತ್ತು.
ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದ ರೈತ ಓಬಳೇಶ್ ಎಂಬುವವರ ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದರಿಂದ, ಸುಮಾರು 1500ಕ್ಕೂ ಹೆಚ್ಚು ಅಡಿಕೆ ಗಿಡಗಳು ಹಾಗೂ ಸಂಗ್ರಹಿಸಿಟ್ಟಿದ್ದ ಎರಡು ಲೋಡ್ ಮೆಕ್ಕೆಜೋಳದ ತೆನೆಗಳು ಬೆಂಕಿಗೆ ಆಹುತಿಯಾಗಿವೆ.
ಲಕ್ಷಾಂತರ ರೂಪಾಯಿ ಸಾಲ ಮಾಡಿ ಹಗಲಿರುಳು ಶ್ರಮಿಸಿದ್ದ ಓಬಳೇಶ್ ಅವರಿಗೆ ಈ ನಷ್ಟ “ಬರಸಿಡಿಲು” ಬಡಿದಂತಾಗಿದೆ. ಅಚ್ಚರಿಯ ವಿಷಯವೆಂದರೆ, ಕಳೆದ ಒಂದು ವರ್ಷದಲ್ಲಿ ಈ ಗ್ರಾಮದಲ್ಲಿ ಇದು ನಾಲ್ಕೈದನೇ ಘಟನೆಯಾಗಿದ್ದು, ಸರಣಿ ಬೆಂಕಿ ಅನಾಹುತಗಳಿಂದ ಗ್ರಾಮದ ರೈತರು ಕಂಗಾಲಾಗಿದ್ದಾರೆ.
ಸ್ಥಳಕ್ಕೆ ಜಗಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.



