ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನಿ ಲಾಂಡರಿಂಗ್ ಮತ್ತು ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಬೆದರಿಕೆ ಹಾಕಿ, ಸೈಬರ್ ವಂಚಕರು ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 26 ಲಕ್ಷ ರೂ. ವಂಚಿಸಿದ್ದಾರೆ.
ವಂಚನೆಗೊಳಗಾದ ವ್ಯಕ್ತಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ತಾವು ಟೆಲಿಕಮ್ಯೂನಿಕೇಷನ್ ಸಂಸ್ಥೆಯಿಂದ ಮಾತನಾಡುತ್ತಿರುವುದಾಗಿ ಹೇಳಿದ್ದಾರೆ. ನಂತರ, ಸಿಮ್ ಕಾರ್ಡ್ ಬ್ಲಾಕ್ ಮಾಡುವುದಾಗಿ ಹೆದರಿಸಲಾಗಿದೆ. ಇದರ ಬೆನ್ನಲ್ಲೇ, ಅವರ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗಿದೆ.
ಮನಿ ಲಾಂಡರಿಂಗ್ ಮತ್ತು ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ನೀವು ಭಾಗಿಯಾಗಿದ್ದೀರಿ ಎಂದು ಬೆದರಿಸಿದ್ದಾರೆ. ಬಳಿಕ ಮತ್ತೊಂದು ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ವಿಡಿಯೋ ಕರೆ ಬಂದಿದೆ. ಈ ಕರೆಯಲ್ಲಿ ಮಾತನಾಡಿದ ವ್ಯಕ್ತಿ, ತಾನು ಮುಂಬೈನ ಕೋಲಾಬಾ ಪೊಲೀಸ್ ಠಾಣೆಯಿಂದ ತನಿಖಾ ಅಧಿಕಾರಿ ಎಂದು ನಟಿಸಿ ಅರೆಸ್ಟ್ ಮಾಡುವ ಬೆದರಿಕೆ ಹಾಕಿದ್ದಾನೆ.
ಮತ್ತೊಬ್ಬ ವಂಚಕ ತಾನು ಇಡಿ ಅಧಿಕಾರಿಯೆಂದು ಪರಿಚಯಿಸಿಕೊಂಡು, ಜಡ್ಜ್ ರವರೊಂದಿಗೆ ಆನ್ಲೈನ್ ಮೀಟಿಂಗ್ ಮಾಡಿಸುವುದಾಗಿ ತಿಳಿಸಿದ್ದಾನೆ. ವಿಡಿಯೋ ಕರೆಯಲ್ಲಿ ಭಾಗಿಯಾದ ನ್ಯಾಯಾಧೀಶರ ಸೋಗಿನ ವ್ಯಕ್ತಿ, ತನಿಖೆಗಾಗಿ ಎಫ್ಡಿ ಮತ್ತು ಉಳಿತಾಯ ಖಾತೆಯಲ್ಲಿರುವ ಹಣವನ್ನು ‘ಸರ್ಕಾರಿ ಖಜಾನೆ’ ಖಾತೆಗೆ ವರ್ಗಾವಣೆ ಮಾಡುವಂತೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಸೂಚಿಸಿದ್ದಾನೆ. ಸೈಬರ್ ವಂಚಕರು ಹಣ ವರ್ಗಾವಣೆಗೆ ನಿರ್ದೇಶಿಸಿ, ʻಬ್ಯಾಂಕ್ ಖಾತೆಯ ವ್ಯವಹಾರ ಸರಿಯಾಗಿದ್ದರೆ, ನಿಮ್ಮ ಹಣವು ವಾಪಸ್ ಬರುತ್ತದೆ, ಇಲ್ಲದಿದ್ದರೆ ಬರುವುದಿಲ್ಲʼ ಎಂದು ನಂಬಿಸಿದ್ದಾರೆ.
ಅನುಮಾನ ಬಂದ ನಂತರ ವ್ಯಕ್ತಿ ಪೊಲೀಸರ ಬಳಿ ಹೋಗಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದೆ.

