ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ನ್ಯಾಯಾಲಯದ ಆದೇಶದಂತೆ ಆಸ್ತಿಯನ್ನು ವಶಪಡಿಸಿಕೊಳ್ಳಲು ಮನೆಯೊಂದಕ್ಕೆ ಹೋಗಿದ್ದ ಪೊಲೀಸರಿಗೆ ಆಘಾತ ಕಾದಿತ್ತು.
ಇಂದು ಮಧ್ಯಾಹ್ನ ಸರಿಯಾಗಿ 2.40ಕ್ಕೆ ಆ ಮನೆಗೆ ಹೋದ ಪೊಲೀಸರು ಮತ್ತು ಅಧಿಕಾರಿಗಳು ಮನೆಗೆ ಹಾಕಲಾಗಿದ್ದ ಬೀಗ ತೆಗೆದು ಒಳಗೆ ಹೋದರು. ಆದರೆ, ಆ ಬೀಗ ಹಾಕಿದ ಮನೆಯೊಳಗೆ ತಾಯಿ ಹಾಗೂ ಇಬ್ಬರು ಗಂಡುಮಕ್ಕಳು ನೇಣು ಹಾಕಿಕೊಂಡು ಮೃತಪಟ್ಟಿದ್ದರು.
ಪೊಲೀಸರು ಬೀಗ ತೆಗೆದು ಒಳಗೆ ಹೋದಾಗ ಅನುರಾಧ ಕಪೂರ್ ಎಂಬ 52 ವರ್ಷದ ಮಹಿಳೆ, ಅವರ ಪುತ್ರರಾದ ಆಶಿಶ್ ಕಪೂರ್ (32) ಮತ್ತು ಚೈತನ್ಯ ಕಪೂರ್ (27) ಮನೆಯೊಳಗೆ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದನ್ನು ಕಂಡು ಆಘಾತಕ್ಕೊಳಗಾದರು.
ತಾಯಿ ಮತ್ತು ಇಬ್ಬರು ಗಂಡುಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದ ನಂತರ ಪೊಲೀಸರು ಇಡೀ ಮನೆಯನ್ನು ಶೋಧಿಸಿದರು. ಮನೆಯ ಒಂದು ಕೋಣೆಯಲ್ಲಿ ಕೈಬರಹದ ಸೂಸೈಡ್ ನೋಟ್ ಪತ್ತೆಯಾಗಿದೆ. ಆ ಕುಟುಂಬವು ತೀವ್ರ ಮಾನಸಿಕ ತೊಂದರೆಯನ್ನು ಎದುರಿಸುತ್ತಿದೆ ಎಂದು ತಿಳಿದುಬಂದಿದೆ. ಮಾನಸಿಕ ತೊಂದರೆಯಿಂದಾಗಿ ಅವರೆಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಮೂವರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು, ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

