ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಧೇರಿ ಓಶಿವಾರಾ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಿವುಡ್ ನಟ ಹಾಗೂ ಸ್ವಯಂಘೋಷಿತ ಸಿನಿಮಾ ವಿಮರ್ಶಕ ಕಮಲ್ ರಶೀದ್ ಖಾನ್ ಅಲಿಯಾಸ್ ಕೆಆರ್ಕೆ ಅವರನ್ನು ಬಂಧಿಸಿದ್ದಾರೆ.
ವಸತಿ ಕಟ್ಟಡದ ಮೇಲೆ ಗುಂಡು ಹಾರಿಸಿದ್ದ ಬಂದೂಕು ಕೆಆರ್ಕೆ ಅವರ ಹೆಸರಿಗೆ ನೋಂದಾಯಿತ ಪರವಾನಗಿ ಪಡೆದ ಬಂದೂಕು ಎನ್ನುವುದು ತನಿಖೆಯಲ್ಲಿ ದೃಢಪಟ್ಟಿದೆ.
ಶುಕ್ರವಾರ ಸಂಜೆ ಕೆಆರ್ಕೆ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದ್ದು, ನಂತರ ತಡರಾತ್ರಿ ಬಂಧಿಸಲಾಗಿದೆ. ವಿಚಾರಣೆ ವೇಳೆ ತಾವೇ ಗುಂಡು ಹಾರಿಸಿದ್ದಾಗಿ ಕೆಆರ್ಕೆ ಒಪ್ಪಿಕೊಂಡಿದ್ದಾರೆ. ಆದರೆ ಯಾರಿಗೂ ಹಾನಿ ಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆ ಅವರ ಬಂದೂಕನ್ನು ವಶಕ್ಕೆ ಪಡೆದು ಕಾನೂನು ಪ್ರಕ್ರಿಯೆ ಮುಂದುವರಿಸಲಾಗಿದೆ.
ಜನವರಿ 18ರಂದು ನಳಂದ ಸೊಸೈಟಿಯ ಎರಡನೇ ಹಾಗೂ ನಾಲ್ಕನೇ ಮಹಡಿಗಳಲ್ಲಿ ಇರುವ ಎರಡು ಫ್ಲಾಟ್ಗಳಿಗೆ ಗುಂಡು ತಾಗಿರುವ ಘಟನೆ ವರದಿಯಾಗಿತ್ತು. ಒಂದು ಫ್ಲಾಟ್ ಬರಹಗಾರ-ನಿರ್ದೇಶಕ ನೀರಜ್ ಕುಮಾರ್ ಮಿಶ್ರಾಗೆ ಸೇರಿದ್ದರೆ, ಇನ್ನೊಂದು ಫ್ಲಾಟ್ ಮಾಡೆಲ್ ಪ್ರತೀಕ್ ಬೈದ್ ಅವರಿಗೆ ಸೇರಿದೆ. ಎರಡೂ ಮನೆಗಳಲ್ಲಿ ಗುಂಡಿನ ಗುರುತುಗಳು ಪತ್ತೆಯಾಗಿವೆ.



