ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ್ ಕುರಿತು ಲೋಕಸಭೆ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿದೆ. ವಿಪಕ್ಷಗಳಿಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ತಿರುಗೇಟು ನೀಡಿದ್ದಾರೆ.
1948ರಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಿಒಕೆಯನ್ನು ವಾಪಾಸ್ ಪಡೆಯಲು ನಿರ್ಣಾಯಕ ಸ್ಥಾನದಲ್ಲಿದ್ದವು. ಆದರೆ ಆಗಿನ ಪ್ರಧಾನಿ ನೆಹರು ಏಕಪಕ್ಷೀಯ ಕದನ ವಿರಾಮವನ್ನು ಘೋಷಿಸಿದರು ಎಂದು ಅಮಿತ್ ಶಾ ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕರು ನಮ್ಮ ಬಳಿ ಪಾಕಿಸ್ತಾನದ ಜೊತೆ ಯಾಕೆ ಯುದ್ಧ ಮಾಡಲಿಲ್ಲ? ಕದನವಿರಾಮ ಘೋಷಿಸಲು ಕಾರಣವೇನು? ಎಂಬ ಪ್ರಶ್ನೆ ಕೇಳಿದರು. ಇಡೀ ದೇಶಕ್ಕೆ ಗೊತ್ತಿರುವ ಸಂಗತಿಯೇನೆಂದರೆ ಇಂದು, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಅಸ್ತಿತ್ವದಲ್ಲಿರುವುದಕ್ಕೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರೇ ಕಾರಣ. 1960ರಲ್ಲಿ ಅವರು ಸಿಂಧೂ ನೀರಿನ 80% ಅನ್ನು ಪಾಕಿಸ್ತಾನಕ್ಕೆ ನೀಡಿದರು. 1971ರಲ್ಲಿ ಶಿಮ್ಲಾ ಒಪ್ಪಂದದ ಸಮಯದಲ್ಲಿ ಅವರು ಪಿಒಕೆಯನ್ನು ಮರೆತರು. ಆಗ ಅವರು ಪಿಒಕೆಯನ್ನು ವಶಪಡಿಸಿಕೊಂಡಿದ್ದರೆ ಈಗ ನಾವು ಅಲ್ಲಿನ ಶಿಬಿರಗಳ ಮೇಲೆ ದಾಳಿ ಮಾಡಬೇಕಾಗಿರಲಿಲ್ಲ ಎಂದು ಶಾ ಕಾಂಗ್ರೆಸ್ ನಾಯಕರ ಬೆವರಿಳಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಅಸ್ತಿತ್ವಕ್ಕೆ ಬರಲು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ನೇರ ಹೊಣೆಗಾರರು. ಇಂದು ಪಿಒಕೆ ಅಸ್ತಿತ್ವದಲ್ಲಿದ್ದರೆ, ಅದು ಜವಾಹರಲಾಲ್ ನೆಹರೂ ಅವರ ಕದನ ವಿರಾಮದಿಂದಾಗಿ. ಅದರ ಫಲವನ್ನು ನಾವು ಅನುಭವಿಸುತ್ತಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ.
1949ರಲ್ಲಿ ಮೊದಲ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ನಿರ್ಧಾರವನ್ನು ಉಲ್ಲೇಖಿಸಿದ ಅಮಿತ್ ಶಾ, ‘ಇದು ಪಾಕಿಸ್ತಾನಕ್ಕೆ ಕಾಶ್ಮೀರದ ಒಂದು ಭಾಗದ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು ಎಂದಿದ್ದಾರೆ. 1960ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಈ ಕ್ರಮವನ್ನು ವಿರೋಧಿಸಿದ್ದರು. ಆದರೆ, ನೆಹರು ತೆಗೆದುಕೊಂಡ ತಪ್ಪು ನಿರ್ಧಾರದಿಂದ ಈಗಲೂ ಪಿಒಕೆ ಅಸ್ತಿತ್ವದಲ್ಲಿದೆ’ ಎಂದು ಕಿಡಿ ಕಾರಿದ್ದಾರೆ.
ನಾವು ಸಿಂದೂ ನೀರಿನ ಮೇಲೆ ಹೆಚ್ಚು ಪ್ರಾಬಲ್ಯ ಹೊಂದಿದ್ದೆವು. ಆದರೆ ಸಿಂದೂ ನೀರಿನ ಒಪ್ಪಂದದ ನಂತರ ನಾವು 80% ನೀರನ್ನು ಪಾಕಿಸ್ತಾನಕ್ಕೆ ನೀಡಿದ್ದೇವೆ.ಆ ನಿರ್ಧಾರವೂ ನಿಮ್ಮ ನೆಹರು ಅವರದ್ದೇ. 1971ರಲ್ಲಿ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾರತದ ವಿಜಯದ ನಂತರ ಕಾಂಗ್ರೆಸ್ ಮತ್ತೊಂದು ನಿರ್ಣಾಯಕ ಅವಕಾಶವನ್ನು ಕಳೆದುಕೊಂಡಿತು. 1971ರ ಗೆಲುವಿನ ಬಗ್ಗೆ ನಮಗೆ ಹೆಮ್ಮೆ ಇದೆ. ನಮ್ಮಲ್ಲಿ 93,000 ಪಾಕಿಸ್ತಾನಿ ಯುದ್ಧ ಕೈದಿಗಳಿದ್ದರು, ಅವರ ಸೈನ್ಯದ ಸುಮಾರು 42%ರಷ್ಟು ಕೈದಿಗಳು ನಮ್ಮ ಬಳಿ ಇದ್ದರು. ಆದರೂ, ನಾವು ಆಗ ಪಿಒಕೆ ನಮಗೆ ಬೇಕೆಂದು ಕೇಳಲಿಲ್ಲ” ಎಂದು ಅವರು ಇತಿಹಾಸವನ್ನು ಕೆದಕುವ ಮೂಲಕ ಕಾಂಗ್ರೆಸ್ ನಾಯಕರು ಮಾಡಿದ ತಪ್ಪನ್ನು ಮತ್ತೆ ನೆನಪಿಸಿದ್ದಾರೆ..